ನವದೆಹಲಿ : 'ಭಾರತೀಯ ಸೇನೆ'ಯ ಯೋಜನೆಗಳು ಕಳೆದ ವರ್ಷದ ಫೆಬ್ರವರಿಯಲ್ಲಿ ಸೋರಿಕೆಯಾಗಿದ್ದು ಪಾಕಿಸ್ತಾನಕ್ಕೆ ಪ್ರತಿಯೊಂದು ಮಾಹಿತಿಯೂ ಲಭ್ಯವಾಗಿದೆ ಎಂಬ ಸ್ಫೋಟಕ ಮಹಿತಿ ಬಯಲಾಗಿದೆ.
ಇಂಡಿಯಾ ಟಿವಿ ವರದಿ ಪ್ರಕಾರ, ಸೇನಾ ಕಾರ್ಯಾಚರಣೆ ಬಗ್ಗೆ 2014ರ ಫೆ.15ರಂದು ಅಂದಿನ ರಕ್ಷಣಾ ಸಚಿವ ಎ.ಕೆ ಆಂಟನಿ ಅವರೊಂದಿಗೆ ಅಂದಿನ ಸೇನಾ ಮುಖ್ಯಸ್ಥ ವಿಕ್ರಮ್ ಸಿಂಗ್ ನಡೆಸಿದ್ದ ಮಹತ್ವದ ಮಾತುಕತೆಯ ಪ್ರಮುಖಾಂಶಗಳು ಸೋರಿಕೆಯಾಗಿವೆ.
ಪಾಕಿಸ್ತಾನದೊಂದಿಗೆ ಗಡಿ ಪ್ರದೇಶವನ್ನು ಹಂಚಿಕೊಂಡಿರುವ ರಾಜಸ್ಥಾನ ಹಾಗೂ ಜಮ್ಮು-ಕಾಶ್ಮೀರದ ಪ್ರದೇಶಗಳಲ್ಲಿ ಸೇನಾಪಡೆಯನ್ನು ನಿಯೋಜಿಸುವುದರ ಬಗ್ಗೆ ಸೇನಾ ಮುಖ್ಯಸ್ಥರು ಹಾಗೂ ರಕ್ಷಣಾ ಸಚಿವರು ಮಾತುಕತೆ ನಡೆಸಿದ್ದರು. ಈ ಮಾತುಕತೆಯಲ್ಲಿನ ಅಂಶಗಳು ಪಾಕಿಸ್ತಾನದ ಐ.ಎಸ್.ಐಗೆ ತಲುಪಿವೆ.
ರಕ್ಷಣಾ ಸಚಿವರೊಂದಿಗೆ ಮಾತುಕತೆ ನಡೆಸಿದ ಬಳಿಕ, ಸೇನಾ ಮುಖ್ಯಸ್ಥರು ಗಡಿ ಪ್ರದೇಶಗಳಲ್ಲಿ ಸೇನಾಪಡೆಯನ್ನು ನಿಯೋಜಿಸುವಂತೆ ಮಿಲಿಟರಿ ಕಾರ್ಯಾಚರಣೆ ನಿರ್ದೇಶಕರಿಗೆ ಸೂಚನೆ ನೀಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನವೂ ಸಹ ಭಾರತದ ಗಡಿ ಪ್ರದೇಶದಲ್ಲಿ ತನ್ನ ಪಡೆಯನ್ನು ನಿಯೋಜಿಸಿತ್ತು. ಪಾಕಿಸ್ತಾನ ಭಾರತದ ಯೋಜನೆಗಳಿಗೆ ಪರ್ಯಾಯವಾಗಿ ಯೋಜನೆಗಳನ್ನು ರೂಪಿಸುತ್ತಿರುವುದರ ಬಗ್ಗೆ ಮಿಲಿಟರಿ ಇಲಾಖೆಯ ಗುಪ್ತಚರ ವಿಭಾಗ ಮಾಹಿತಿ ನೀಡಿತ್ತು.
ಪಾಕಿಸ್ತಾನಕ್ಕೆ ಮಾಹಿತಿ ಸೋರಿಕೆಯಾಗಿರುವುದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಗಮನಕ್ಕೆ ಬಂದ ನಂತರ ರಕ್ಷಣಾ ಸಚಿವಾಲಯದ ಕಚೇರಿಯ ಸುತ್ತಮುತ್ತಲ ಪ್ರದೇಶದಲ್ಲಿ ಸಿಸಿಟಿವಿಯನ್ನು ಅಳವಡಿಸಲಾಗಿದೆ.