ಬೆಂಗಳೂರು : ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಓಂ ಪ್ರಕಾಶ್ ನೇಮಕ ಅಂತಿಮಗೊಳಿಸಲಾಗಿದ್ದು, ಶುಕ್ರವಾರ ಮಧ್ಯಾಹ್ನದ ವೇಳೆಗೆ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ.
ಹಾಲಿ ಪೊಲೀಸ್ ಮಹಾ ನಿರ್ದೇಶಕರಾಗಿರುವ ಲಾಲ್ ರುಕುಮ್ ಪಚಾವೋ ಅವರ ಅಧಿಕಾರಾವಧಿ ಫೆ.28ಕ್ಕೆ ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ ಮಹಾನಿರ್ದೇಶಕರ ಸ್ಥಾನಕ್ಕೆ ಹೊಸ ನೇಮಕಾತಿ ನಡೆಯಬೇಕಿತ್ತು. ಯಾರನ್ನು ಡಿಜಿಪಿಯಾಗಿ ನೇಮಿಸಬೇಕೆಂಬ ಕುರಿತು ಸರ್ಕಾರ ಹಲವು ದಿನಗಳಿಂದ ಗೊಂದಲ ಎದುರಿಸುತ್ತಿತ್ತು.
ಡಿಜಿಪಿ ಹುದ್ದೆಗೆ ಆರ್.ಕೆ ದತ್ತಾ, ಓಂ ಪ್ರಕಾಶ್, ಬಿಪಿನ್ ಗೋಪಾಲ್ ಕೃಷ್ಣ, ಸುಶಾಂತ್ ಮಹಾಪಾತ್ರ ಅವರ ಹೆಸರು ಕೇಳಿಬಂದಿತ್ತಾದರೂ ಓಂ ಪ್ರಕಾಶ್ ಅವರನ್ನೇ ಐಜಿ-ಡಿಜಿಪಿ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ಅಂಕಿತ ಹಾಕಿದ್ದು, ಮಧ್ಯಾಹ್ನದ ವೇಳೆಗೆ ಅಧಿಕೃತ ಘೋಷಣೆ ಹೊರಬೀಳಲಿದೆ.
ಓಂ ಪ್ರಕಾಶ್ ಅವರು ಈ ಹಿಂದೆ ಅಗ್ನಿಶಾಮಕ ದಳದ ಡಿಜಿಪಿಯಾಗಿ ಸೇವೆ ಸಲ್ಲಿಸಿದ್ದಾರೆ.