ಬೆಂಗಳೂರು : 'ಐಟಿ ಕಾರಿಡಾರ್ ಯೋಜನೆ'ಯಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆಸಿರುವ ಆರೋಪದ ಸಂಬಂಧ ಸಚಿವ ಆರ್.ವಿ ದೇಶಪಾಂಡೆ ವಿರುದ್ಧ ಲೋಕಾಯುಕ್ತ ತನಿಖೆ ನಡೆಯುತ್ತಿರುವುದರ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯರಿಂದ ವಿವರಣೆ ಕೇಳಿದೆ.
ದೂರವಾಣಿ ಮೂಲಕ ಸಿ.ಎಂ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಕರಣದ ಸಂಬಂಧ ಸಂಪೂರ್ಣ ವಿವರಣೆ ಕೇಳಿದ್ದಾರೆ ಎಂದು ಖಾಸಗಿ ಮಾಧ್ಯಮ ವರದಿ ಪ್ರಕಟಿಸಿದೆ.
ಪ್ರವಾಸೋದ್ಯಮ ಸಚಿವ ಆರ್.ವಿ ದೇಶಪಾಂಡೆ ವಿರುದ್ಧ ಲೋಕಾಯುಕ್ತ ತನಿಖೆಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಫೆ.18ರಂದು ಆದೇಶ ನೀಡಿತ್ತು. ಕೋರ್ಟ್ ತೀರ್ಪಿನಿಂದ ಸಿ.ಎಂ ಸಿದ್ದರಾಮಯ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿದ್ದರ ಹಿನ್ನೆಲೆಯಲ್ಲಿ ಹಗರಣದ ಸಂಬಂಧ ಸೋನಿಯಾ ಗಾಂಧಿ ಸಂಪೂರ್ಣ ವಿವರ ಕೇಳಿದ್ದಾರೆ .
2001ರಲ್ಲಿ ಕೈಗಾರಿಕೆ ಸಚಿವರಾಗಿದ್ದ ದೇಶಪಾಂಡೆ ಅವರು ಐಟಿ ಕಾರಿಡಾರ್ ಯೋಜನೆಯಲ್ಲಿ ಅಕ್ರಮವಾಗಿ 7೦ ಎಕರೆ ಭೂಮಿ ಡೀನೋಟಿಫೈ ಮಾಡಿದ್ದಾರೆ ಎಂದು ವಾಸುದೇವ ರೆಡ್ಡಿ ಎನ್ನುವವರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ಈ ದೂರನ್ನು ಪರಿಗಣಿಸಿರುವ ನ್ಯಾಯಾಲಯ ಲೋಕಾಯುಕ್ತ ಡಿ.ವೈ.ಎಸ್.ಪಿಗೆ ತನಿಖೆ ನಡೆಸುವಂತೆ ಈಗಾಗಲೇ ಸೂಚನೆ ನೀಡಿದೆ.
ಕೈಗಾರಿಕಾ ಸಚಿವರಾಗಿದ್ದ ಆರ್.ವಿ ದೇಶಪಾಂಡೆ, ಐಟಿ ಕಾರಿಡಾರ್ ಯೋಜನೆಗಾಗಿ ಸ್ವಾಧೀನ ಪಡಿಸಿಕೊಳ್ಳಲಾಗಿದ್ದ ಸುಮಾರು 70 ಎಕರೆ ಜಮೀನನ್ನು ಅಕ್ರಮವಾಗಿ ಭೂಸ್ವಾಧೀನದಿಂದ ಕೈಬಿಟ್ಟಿದ್ದಾರೆ ಎಂದು ವಾಸುದೇವ ರೆಡ್ಡಿ ಆರೋಪಿಸಿದ್ದರು.