ನವದೆಹಲಿ : ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಿದ್ದು, ಬಜೆಟ್ ಅಧಿವೇಶನ ಸುಗಮವಾಗಿ ಸಾಗುವ ವಿಶ್ವಾಸವಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಸರ್ಕಾರದ ಗುರಿಯಾಗಿದ್ದು, ಆರ್ಥಿಕ ಬೆಳವಣಿಗೆ ಸಾಧಿಸಲು ಸರ್ಕಾರದಿಂದ ಹೊಸ ಹೆಜ್ಜೆ ಇಡಲಾಗಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.
ಸಂಸತ್ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಮುಖರ್ಜಿ, ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡಯ್ಯಲು ನಮ್ಮ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.
ನಮ್ಮ ಸರ್ಕಾರ ಒಳಚರಂಡಿ ವ್ಯವಸ್ಥೆ, ಸ್ಮಾರ್ಟ್ ಸಿಟಿಗೆ ಒತ್ತು ನೀಡುತ್ತದೆ. ತಂತ್ರಜ್ನಾನ ಬಳಸಿಕೊಂಡು ಅಭಿವೃದ್ಧಿ ಸಾಧಿಸಬೇಕು. ರಾಷ್ಟ್ರದ ಉತ್ಪಾದನಾ ವಲಯಕ್ಕೆ ಹೆಚ್ಚು ಆದ್ಯತೆ ನೀಡುತ್ತೇವೆ. ಹಣದುಬ್ಬರ ನಿಯಂತ್ರಣಕ್ಕೆ ಸರ್ಕಾರದಿಂದ ಹಲವು ನಿರ್ಧಾರ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಫಲವಾಗಿದ್ದು, ಮಹತ್ವಾಕಾಂಕ್ಷಿ ಜನ್-ಧನ್ ಯೋಜನೆ ಯಶಸ್ವಿಯಾಗಿದೆ ಎಂದು ಸರ್ಕಾರದ ಸಾಧನೆಗಳನ್ನು ವಿವರಿಸಿದರು.
ಬಡವರ ಅಭಿವೃದ್ಧಿಗಾಗಿ ಸರ್ಕಾರ ಬದ್ಧವಾಗಿದ್ದು, ಪ್ರಧಾನಮಂತ್ರಿ ಜನ್-ಧನ್ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. 13.2 ಕೋಟಿ ಖಾತೆ ತೆರೆಯಲಾಗಿದೆ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ. ಬಡತನ ನಿರ್ಮೂಲನೆಗೆ ಈ ಯೋಜನೆ ಉಪಯುಕ್ತವಾಗಲಿದ್ದು, ಈ ಯೋಜನೆ ಸರ್ಕಾರದ ಒಂದು ಹೊಸ ಮೈಲುಗಲ್ಲು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜನವರಿಯಿಂದ ಎಲ್ ಪಿಜಿ ಸಬ್ಸಿಡಿಯನ್ನು ನೇರವಾಗಿ ಗ್ರಾಹಕರ ಖಾತೆಗೆ ವರ್ಗಾಯಿಸಲಾಗಿದೆ. ಸ್ವಚ್ಛತೆಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದ್ದು, ಸ್ವಚ್ಛ ಭಾರತ್ ಮಿಷನ್ ಅಕ್ಟೋಬರ್ ನಿಂದ ಜಾರಿಗೆ ತರಲಾಗಿದೆ. 2015, ಆಗಸ್ಟ್ 15ರೊಳಗೆ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ದೇಶದ ಹಲವೆಡೆ ರೈತರಿಂದ ಭೂಮಿ ವಶಪಡಿಸಿಕೊಳ್ಳಲಾಗಿದ್ದು, ರೈತರಿಂದ ವಶಪಡಿಸಿಕೊಳ್ಳುವ ಭೂಮಿಗೆ ಪಾರದರ್ಶಕ ದರ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಇಂತಹ ಭೂಮಿಯಲ್ಲಿ ಶಾಲೆ, ಆಸ್ಪತ್ರೆಗಳ ನಿರ್ಮಾಣ ಮಾಡಲಾಗುವುದು ಎಂದರು.
ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಮಾರುಕಟ್ಟೆಯದ್ದೇ ಸಮಸ್ಯೆಯಾಗಿದ್ದು, ದೇಶದ ಮಾರುಕಟ್ಟೆ ಸುಧಾರಣೆಗೆ ಸರ್ಕಾರ ಬದ್ಧವಾಗಿದೆ, ರೈತರಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಆಹಾರ ಸಂಸ್ಕರಣೆ ಹಾಗೂ ಮೂಲಸೌಕರ್ಯ ಹಾಗೂ ಮಾರುಕಟ್ಟೆ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ಶಿಕ್ಷಣಕ್ಕೆ ನಮ್ಮ ಸರ್ಕಾರ ಹೆಚ್ಚಿನ ಒತ್ತು ನೀಡಿದ್ದು, ಈಶಾನ್ಯ ರಾಜ್ಯಗಳಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಭಾರತ ವಿಶ್ವದಲ್ಲೇ ಅತಿ ಹೆಚ್ಚು ಯುವಕರನ್ನು ಹೊಂದಿರುವ ರಾಷ್ಟ್ರ. ಭಾರತದ ಯುವ ಜನಾಂಗದ ಶಕ್ತಿ ಅನಾವರಣಗೊಳ್ಳಬೇಕಿದೆ. ಉತ್ತಮ ಶಿಕ್ಷಣ ಒದಗಿಸುವುದರಿಂದ ದೇಶದ ಅಭಿವೃದ್ಧಿಯಾಗಲಿದೆ. ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದು. ಈ ನಿಟ್ಟಿನಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಜಾರಿ. ಪ್ರತಿ ಮಗುವಿಗೂ ಶಿಕ್ಷಣ ನೀಡಲು ನಾವು ಬದ್ಧ. ಕಾನೂನು ಸುಧಾರಣೆ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ರಾಜ್ಯ ಸರ್ಕಾರ ಹಾಗೂ ದೇಶದ ಜನರ ಸಹಕಾರದೊಂದಿಗೆ ಕಾನೂನು ಸುಧಾರಣೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
* 2022 ರ ವೇಳೆಗೆ ಪ್ರತಿಯೊಬ್ಬರಿಗೂ ಮನೆ ಒದಗಿಸಲು ಕ್ರಮ.
* ವಸತಿ ನಿರ್ಮಾಣ ವಲಯದಲ್ಲಿ ಎಫ್ ಡಿಐ ಪಾಲಿಸಿ ಜಾರಿಗೆ ನಿರ್ಧಾರ.
* ಎಫ್ ಡಿಐ ನಿಂದ ರೈಲ್ವೆ ಇಲಾಖೆಗೆ ಭಾರೀ ಉತ್ತೇಜನ.
* ದೆಹಲಿಯಲ್ಲಿ ಮಹಿಳೆಯರ ಭದ್ರತೆಗೆ ಮೊಬೈಲ್ ಸೇವೆ ಆರಂಭಿಸಲಾಗಿದೆ.
* ಭೂಸ್ವಾಧೀನ ಕಾಯ್ದೆ ರೈತರ ಹಿತಕ್ಕಾಗಿ ಇದೆ.
* ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಗಳ ನ್ಯಾಯಮೂರ್ತಿಗಳ ನೇಮಕಕ್ಕೆ ಪ್ರತ್ಯೇಕ ಸಮಿತಿ ರಚಿಸಲಾಗಿದೆ.
* ಅಹ್ಮದಾಬಾದ್ ಹಾಗೂ ನಾಗ್ಪುರದಲ್ಲಿ ಮೆಟ್ರೋ ರೈಲು ಓಡಾಟಕ್ಕೆ ಕ್ರಮ.