ಬೆಂಗಳೂರು : ರಾಜ್ಯ ಸರ್ಕಾರ 8 ಗಣಿ ಗುತ್ತಿಗೆ ಕಂಪನಿಗಳ ಗುತ್ತಿಗೆ ನವೀಕರಣಕ್ಕೆ ಆದೇಶ ನೀಡಿರುವುದಕ್ಕೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗಣಿ ಕಂಪನಿಗಳ ಲಾಭಿಗೆ ರಾಜ್ಯ ಸರ್ಕಾರ ಮಣಿದಿದೆ. ನಿಯಮ ಉಲ್ಲಂಘಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೈನ್ಸನ್ಸ್ ನೀಡುವ ಮೂಲಕ ಕಾನೂನೂ ವಿರೋಧಿ ಕ್ರಮ ಕೈಗೊಂಡಿದ್ದಾರೆ ಎಂದರು.
ಈಗಾಗಲೇ ಪ್ರಮುಖವಾಗಿ 2 ಗಣಿ ಗುತ್ತಿಗೆ ಕಂಪನಿಗಳ ನವೀಕರಣಕ್ಕೆ ಸಿಎಂ ಶಿಫಾರಸು ಮಾಡಿದ್ದಾರೆ. ಕಂಪನಿಗಳ ಹಿತಾಸಕ್ತಿ ಕಾಯಲು ಸರ್ಕಾರ ಮುಂದಾಗಿವೆ. ಕಂಪನಿಗೆ ಲಾಭವಾಗುವಂತೆ ನೋಡಿಕೊಂಡಿದ್ದಾರೆ ಈ ಮೂಲಕ ಸಿಎಂ ಸಿದ್ದರಾಮಯ್ಯ ರಾಜ್ಯದ ಹಿತಾಸಕ್ತಿ ಕಡೆಗಣಿಸಿದ್ದಾರೆ. ಇದರಲ್ಲಿ ಅಧಿಕಾರ ದುರುಪಯೋಗ ಸ್ಪಷ್ಟವಾಗಿ ಕಾಣುತ್ತಿದ್ದು, ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
8 ಗಣಿ ಗುತ್ತಿಗೆ ಕಂಪನಿಗಳ ಪೈಕಿ ಎಷ್ಟು ಕಂಪನಿಗಳು ನವೀಕರಣವಾಗಿದೆ. ನವೀಕರಣಗೊಂಡ ಕಂಪನಿ ಯಾರಿಗೆ ಸೇರಿದ್ದು, ಕಂಪನಿ ಮಾಲೀಕರಿಗೂ ರಾಜ್ಯ ಸರ್ಕಾರಕ್ಕೂ ಏನು ಸಂಬಂಧ? ಈ ಕುರಿತು ಅಧಿವೇಶನದಲ್ಲಿ ಸ್ಪಷ್ಟನೆ ನೀಡುವಂತೆ ಪ್ರಸ್ತಾಪಿಸಿದರೂ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಕಿಡಿಕಾರಿದರು.
ಇನ್ನು ರಾಯಚೂರು ಸೇರಿದಂತೆ ಹೈದ್ರಾಬಾದ್ ಕರ್ನಾಟಕದಲ್ಲಿ ತಾಂಡವವಾಡುತ್ತಿರುವ ಅಪೌಷ್ಟಿಕತೆ ಕುರಿತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶೆಟ್ಟರ್, ಸರ್ಕಾರದ ನಿರ್ಲಕ್ಷಕ್ಕೆ ಮಕ್ಕಳು ಬಲಿಯಾಗುವ ಪರಿಸ್ಥಿತಿ ಬಂದಿದೆ.
ರಾಯಚೂರು ಮೂಲದ 14 ವರ್ಷದ ಬಾಲಕಿ ಸೇರಿದಂತೆ ಇಬ್ಬರು ಮಕ್ಕಳು ಸಾವು ಪ್ರಕರಣ ಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಉತ್ತಮ ಸೇವೆ ನೀಡದಿರುವುದೇ ಇದಕ್ಕೆ ಕಾರಣ. ಉತ್ತರ ಕರ್ನಾಟಕದಲ್ಲಿ ಅಪೌಷ್ಠಿಕತೆ ತಡೆಯಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಇನ್ನೆಷ್ಟು ಬಲಿಯಾಗಬೇಕು. ಇಂಥ ಪ್ರಕರಣ ಮತ್ತೆ ಮರುಕಳಿಸಬಾರದು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಜವಾಬ್ದಾರಿಯಿಂದ ಕೆಲಸ ಮಾಡುತ್ತಿಲ್ಲ. ಎಲ್ಲಾ ಇಲಾಖೆ ಅಧಿಕಾರಿಗಳು ಜವಾಬ್ದಾರಿ ಮರೆತಿದ್ದಾರೆ. ಅಷ್ಟೇಅಲ್ಲ ಸರ್ಕಾರದ ಎಲ್ಲಾ ಇಲಾಖೆಗಳು ನಿಷ್ಕ್ರಿಯವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.