ನವದೆಹಲಿ : 'ಗಣರಾಜ್ಯೋತ್ಸವ'ದಂದು ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಪ್ರಧಾನಿ ನರೇಂದ್ರ ಮೋದಿ ಧರಿಸಿದ್ದ ಸೂಟ್ ಈಗ ಒಂದು ಉತ್ತಮ ಕೆಲಸಕ್ಕೆ ಸಹಾಯಕಾರಿಯಾಗಲಿದೆ.
ಗಣರಾಜ್ಯೋತ್ಸವದಂದು ಪ್ರಧಾನಿ ಮೋದಿ ತಮ್ಮದೇ ಹೆಸರುಳ್ಳ ಸೂಟ್ ನ್ನು ಧರಿಸಿದ್ದರು. ಈಗ ಆ ಸೂಟ್ ನ್ನು ಹರಾಜಿಡಲಾಗಿದ್ದು, ಅದರಿಂದ ಬರುವ ಹಣವನ್ನು ಗಂಗಾ ನದಿ ಸ್ವಚ್ಛತೆಗಾಗಿ ಬಳಸಲಾಗುತ್ತದೆ. ಕೇಂದ್ರ ಸರ್ಕಾರ ಮೂರು ದಿನಗಳ ಕಾಲ ಹರಾಜು ಮೇಳವನ್ನು ಆಯೋಜಿಸಿದ್ದು ಈ ಹರಾಜಿನಿಂದ ಬಂದ ಹಣವನ್ನು ನಮಾಮಿ ಗಂಗಾ ಟ್ರಸ್ಟ್ ಗೆ ದೇಣಿಗೆ ರೂಪದಲ್ಲಿ ನೀಡಲಾಗುವುದು ಎಂದೂ ಕೇಂದ್ರ ಸರ್ಕಾರ ತಿಳಿಸಿದೆ. ಇಂದಿನಿಂದ ಮೂರು ದಿನ ಸೂರತ್ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಉದ್ಯಮಿಗಳು ಸಹಿತ ಹಲವಾರು ಮಂದಿ ಭಾಗಿಯಾಗಲಿದ್ದಾರೆ.
ಮೋದಿ ಧರಿಸಿದ್ದ ಸೂಟಿನ ಬೆಲೆಯನ್ನು ಅಂದಾಜಿಸಿ ಮಾಧ್ಯಮಗಳು ದಿನಗಟ್ಟಲೆ ಚರ್ಚೆ ನಡೆಸಿದ್ದವು. ನರೇಂದ್ರ ದಾಮೋದರ ಮೋದಿ ಎಂದು ಚಿನ್ನದ ದಾರದಲ್ಲಿ ಬರೆದಿರುವುದೇ ಈ ಸೂಟ್ ನ ವಿಶೇಷತೆ. ಇದಲ್ಲದೆ ಪ್ರಧಾನಿ ವಿದೇಶ ಪ್ರವಾಸ ಕೈಗೊಂಡಿದ್ದಾಗ ಮತ್ತು ವಿದೇಶಿ ಅತಿಥಿಗಳು ದೆಹಲಿಗೆ ಭೇಟಿ ನೀಡಿದ್ದ ವೇಳೆ ನೀಡಿದ್ದ ಉಡುಗೊರೆಗಳನ್ನು ಈ ಸಂದರ್ಭದಲ್ಲಿ ಹರಾಜು ಮಾಡಲಾಗುತ್ತದೆ. ಪ್ರಧಾನಿ ಮೋದಿ ಅವರ ಸೂಟ್ ಎಷ್ಟು ಮೊತ್ತಕ್ಕೆ ಹರಾಜಾಗಲಿದೆ ಎಂಬುದು ಕುತೂಹಲವಾಗಿದೆ.
ಈ ಹಿಂದೆ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ತಮಗೆ ಬಂದಿದ್ದ ಉಡುಗೊರೆಗಳನ್ನು ಹರಾಜಿಗಿಟ್ಟು ಅದರಿಂದ ಬಂದ ಹಣವನ್ನು ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿಸಿದ್ದರು.