ನವದೆಹಲಿ : 'ಕಾಂಗ್ರೆಸ್ ಗೆ ಹೊಸ ಯೋಚನೆಗಳ ದಿವಾಳಿತನ ಎದುರಾಗಿದೆ. ಸರಕಾರವನ್ನು ಟೀಕಿಸಲು ಅದಕ್ಕೆ ಯಾವುದೇ ಸಮರ್ಪಕವಾದ ವಿಷಯಗಳಿಲ್ಲವಾಗಿದೆ' ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ದಿ.ಟ್ರಿಬ್ಯೂನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮೋದಿ, ಇತ್ತೀಚೆಗೆ ರಾಹುಲ್ ಗಾಂಧಿ, ಮೋದಿ ಸರಕಾರದ ವಿರುದ್ಧ ಮಾಡಿದ, 'ಸೂಟ್-ಬೂಟ್-ಕಿ-ಸರ್ಕಾರ್' ವ್ಯಂಗ್ಯೋಕ್ತಿಯನ್ನು ಉಲ್ಲೇಖಿಸುತ್ತ, ಇದು ಪ್ರತಿಪಕ್ಷದ ದಿವಾಳಿತನವನ್ನು ತೋರಿಸುತ್ತದೆ. ಕಳೆದ ಒಂದು ವರ್ಷದಲ್ಲಿ ಕಾಂಗ್ರೆಸ್ಸಿಗರಿಗೆ ಸರಕಾರವನ್ನು ಟೀಕಿಸಲು ಒಂದೇ ಒಂದು ಸರಿಯಾದ ವಿಷಯ ಸಿಗಲಿಲ್ಲ. ಇದು ನಮ್ಮ ಅತ್ಯಂತ ಮುಖ್ಯವಾದ ಯಶಸ್ಸು' ಎಂದರು.
'ಅಛ್ಚೇ ದಿನ್ ಎಂಬ ಘೋಷಣೆ ಕೆಟ್ಟದ್ದನ್ನು ಹೋಗಲಾಡಿಸುವುದಕ್ಕಾಗಿ ಮಾಡಿದ್ದೆವು. ಅದನ್ನು ನಾವು ಸಾಧಿಸಿದ್ದೇವೆ' ಎಂದು ಪ್ರಧಾನಿ ಸಂದರ್ಶನದಲ್ಲಿ ಹೇಳಿದ್ದಾರೆ.
ವಿವಾದಿತ ಭೂ ಸ್ವಾಧೀನ ಕಾಯ್ದೆ ವಿರುದ್ಧ ಕಾಂಗ್ರೆಸ್ ಪಕ್ಷದ ವಿರೋಧದ ಬಗ್ಗೆ ಮಾತನಾಡಿದ ಮೋದಿ, ಕಾಂಗ್ರೆಸ್ಸಿಗೆ ಈ ಕಾಯ್ದೆಯನ್ನು ವಿರೋಧಿಸಲು ನೈತಿಕ ಹಕ್ಕಿಲ್ಲ. ಕಳೆದ 60 ವರ್ಷಗಳ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ದೇಶದ 3 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 60 ವರ್ಷಗಳ ಕಾಲ ಅವರು (ಕಾಂಗ್ರೆಸ್) ಹಳೆಯ ಭೂ ಸ್ವಾಧೀನ ಕಾಯ್ದೆಯನ್ನೇ ಮುಂದುವರಿಸಿದರು. ಅಂದರೆ, ಆಗ ಅವರು ರೈತ ವಿರೋಧಿಗಳಾಗಿದ್ದರೆ? ಎಂದು ಪ್ರಶ್ನಿಸಿದರು.
3 ಲಕ್ಷ ರೈತರನ್ನು ಆತ್ಮಹತ್ಯೆಗೆ ದೂಡಿದವರಿಗೆ ಈಗ ಹೊಸ ಕಾಯ್ದೆಯನ್ನು ದೂರುವುದಕ್ಕೆ ನೈತಿಕ ಹಕ್ಕಿಲ್ಲ. ಮೊದಲು ಚಾಲ್ತಿಯಲ್ಲಿದ್ದ ಕಾಯ್ದೆ 120 ವರ್ಷಗಳಷ್ಟು ಹಳೆಯದು. ರಾಜಕೀಯ ಉದ್ದೇಶಗಳಿಗಾಗಿ (ಹಿಂದಿನ ಕಾಂಗ್ರೆಸ್ ಸರಕಾರ) ಅವರು ಭೂ ಸ್ವಾಧೀನ ಕಾಯ್ದೆಯನ್ನು ತುರಾತುರಿಯಲ್ಲಿ ಜಾರಿಗೆ ತಂದರು ಎಂದು ಪ್ರಧಾನಿ ಮೋದಿ ಸಂದರ್ಶನದಲ್ಲಿ ಹೇಳಿದ್ದಾರೆ.
ನಿವೃತ್ತ ಯೋಧರ 'ಒಂದು ರ್ಯಾಂಕ್ ಒಂದು ಪೆನ್ಷನ್' ಯೋಜನೆಯ ಬಗ್ಗೆ ಮಾತನಾಡಿದ ಪ್ರಧಾನಿ, ಇದನ್ನು ಜಾರಿಗೊಳಿಸುವ ಬಗ್ಗೆ ಯಾವುದೇ ಸಂದೇಹ ಬೇಡ. ಸರಕಾರ ಇದನ್ನು ಜಾರಿಗೊಳಿಸಲು ಮುತುವರ್ಜಿಯಿಂದ ಕೆಲಸ ಮಾಡುತ್ತಿದೆ ಎಂದರು.
ಕಪ್ಪುಹಣದ ಬಗ್ಗೆ ಮಾತನಾಡಿದ ಮೋದಿ, ಈ ವಿಚಾರದಲ್ಲಿ ಯಾರನ್ನೂ ಬಿಡುವುದಿಲ್ಲ. ಆದರೆ, ಕಪ್ಪುಹಣ ದಂಧೆಯಲ್ಲಿ ತೊಡಗಿದವರ ಹೆಸರುಗಳನ್ನು ಕಾನೂನು ಪ್ರಕಾರ ಕೇವಲ ಸುಪ್ರೀಂ ಕೋರ್ಟ್ ಗೆ ತಿಳಿಸಲಾಗುವುದು ಎಂದಿದ್ದಾರೆ.