ಬೆಂಗಳೂರು : ತಮಿಳುನಾಡಿನಲ್ಲಿ ಕನ್ನಡ ಹೆಚ್ಚು ಮಾತನಾಡುವ ಕೆಲವು ಪ್ರದೇಶಗಳ ಶಾಲೆಗಳನ್ನು ತಮಿಳು ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಕಲಿಯಬೇಕು ಎಂದು ಒತ್ತಡ ಹೇರಿರುವುದು ಗಮನಕ್ಕೆ ಬಂದಿದ್ದು, ತಮಿಳುನಾಡು ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ನ್ಯಾಯಾಲಯ ರಿಟ್ ಅರ್ಜಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಭಾಸ್ ಎಸ್.ಛಾಯಾಗೋಳ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು ತಮಿಳು ನಾಡಿನ ತಾಳವಾಡಿ ಫರ್ಕಾ ಪ್ರದೇಶಗಳಲ್ಲಿ ಕನ್ನಡ ಕಲಿಯುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಕಾನೂನು ತಜ್ಞರ ಸಲಹೆ ಪಡೆದು ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗುವುದು ಎಂದರು.
ಪ್ರೊ.ಬರಗೂರು ರಾಮಚಂದ್ರಪ್ಪ ಹಾಗೂ ಮಾಜಿ ಶಾಸಕರಾದ ವಾಟಾಳ್ ನಾಗರಾಜ್ ಅವರು ಸರ್ಕಾರಕ್ಕೆ ಸಲ್ಲಿಸಿರುವ ಗಡಿನಾಡು ಅಧ್ಯಯನ ವರದಿಯನ್ನು ಓದಿದ್ದು ಅನುಷ್ಠಾನಗೊಳಿಸಲು ಕ್ರಮ ಜರುಗಿಸಲಾಗುವುದು ಎಂದ ಅವರು, ಈ ಸಂಬಂಧ ಮುಂದಿನ ಆಯವ್ಯಯದಲ್ಲಿ 100 ಕೊಟಿ ರೂ. ಅನುದಾನವನ್ನು ಪ್ರಾಧಿಕಾರಕ್ಕೆ ಒದಗಿಸುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಗಡಿಭಾಗದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣ, ಗ್ರಂಥಾಲಯಗಳನ್ನು ಪ್ರಾರಂಭಿಸುವುದು, ಕನ್ನಡ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒಗದಿಸಲು ಪ್ರಾಧಿಕಾರವು ಹಲವು ಯೋಜನೆಗಳನ್ನು ಹಮ್ಮಿಕೊಂಡು ಪ್ರಾಧಿಕಾರದಲ್ಲಿ ಈಗಿರುವ 80 ಲಕ್ಷ ರೂ ಅನುದಾನದಲ್ಲಿ ಚಿತ್ರದುರ್ಗ, ಯಾದಗಿರಿ, ರಾಯಚೂರು, ವಿಜಯಾಪುರ, ಬೀದರ್, ಗುಲ್ಬರ್ಗಾ ಜಿಲ್ಲೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ ಎಂದ ಪ್ರಾಧಿಕಾರದ ಅಧ್ಯಕ್ಷರು ಗಡಿಭಾಗಗಳಲ್ಲಿ ಈ ಹಿಂದೆ ಕನ್ನಡ ಪರ ಕೆಲಸಗಳು ಹೆಚ್ಚಾಗಿ ನಡೆದಿರುವುದು ಕಂಡು ಬಂದಿದೆ ಎಂದು ಹೇಳಿದ್ದಾರೆ.