ಬೆಂಗಳೂರು : 'ಜೆಡಿಎಸ್' ಪಕ್ಷವನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ನನಗಾಗಿ ಪ್ರಾಣಕೊಡುವವರಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿದ್ದಾರೆ.
ಫೆ.16ರಂದು ಹೆಣ್ಣೂರಿನಲ್ಲಿರುವ ಜೆಡಿಎಸ್ ತಾತ್ಕಾಲಿಕ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಹೆಚ್.ಡಿ ದೇವೇಗೌಡ, ಪಕ್ಷ ಸಂಘಟನೆಯೇ ತಮ್ಮ ಮೊದಲ ಆದ್ಯತೆ, ಆನಂತರದ ಆದ್ಯತೆ ಜನತಾ ಪರಿವಾರವನ್ನು ಒಗ್ಗೂಡಿಸುವುದು ಎಂದು ತಿಳಿಸಿದ್ದಾರೆ.
ಅಧಿಕಾರ ಅನುಭವಿಸಿದವರು ಇಂದು ನನ್ನ ಸಹಾಯಕ್ಕೆ ಬರಲಿಲ್ಲ. ಸಧ್ಯಕ್ಕೆ ರಮೇಶ್ ಗೌಡ ಅವರ ಗೋದಾಮಿನಲ್ಲಿ ಪಕ್ಷದ ತಾತ್ಕಾಲಿಕ ಕಚೇರಿ ತೆರೆಯಲಾಗಿದೆ. ರಮೇಶ್ ಗೌಡ ಇಲ್ಲದಿದ್ದರೆ ಪಕ್ಷದ ಕಚೇರಿಗೆ ತೊಂದರೆಯಾಗುತ್ತಿತ್ತು. ಪಕ್ಷ ಸಂಘಟನೆಗೆ ರಮೇಶ್ ಗೌಡರಂತಹ ಯುವಕರ ಅಗತ್ಯವಿದೆ. ಯುವಕರು ನನ್ನೊಂದಿಗಿದ್ದು ಜೆಡಿಎಸ್ ನಾಶವಾಗಲು ನಾನು ಬಿಡುವುದಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಗೆ ಬಿಟ್ಟುಕೊಟ್ಟ ಜೆಡಿಎಸ್ ಕಛೇರಿ ಕಟ್ಟಡದ ಬಗ್ಗೆ ವ್ಯಾಮೋಹವಿರಲಿಲ್ಲ ಎಂದು ಸ್ಪಷ್ಟಪಡಿಸಿರುವ ದೇವೇಗೌಡರು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಗೆ ಕರೆ ಮಾಡಿ ಮಾತನಾಡಿರುವುದಾಗಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ನ ಆದೇಶದ ಅನ್ವಯ ಫೆ.16ರಂದು ಜೆಡಿಎಸ್ ನಾಯಕರು ತಮ್ಮ ಕಚೇರಿಯ ಕೀಲಿಯನ್ನು ಕಾಂಗ್ರೆಸ್ ಗೆ ಹಸ್ತಾಂತರಿಸಿದ್ದಾರೆ. ಜೆಡಿಎಸ್ ಕಚೇರಿ ಕಾಂಗ್ರೆಸ್ ಗೆ ಸೇರಿದ್ದು ಜೆಡಿಎಸ್ ಪಕ್ಷ ಕಾಂಗ್ರೆಸ್ ಗೆ ಕಚೇರಿಯನ್ನು ವಾಪಸ್ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.