ಬೆಂಗಳೂರು : ಮಾ.13ರಂದು ಬಹುನಿರೀಕ್ಷಿತ ರಾಜ್ಯ ಬಜೆಟ್ ಮಂಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಫೆ.19ರಿಂದ ಬಜೆಟ್ ಪೂರ್ವಭಾವಿ ಸಭೆ ಆರಂಭವಾಗಲಿದ್ದು, ಮಾ.13ರಿಂದ 31ರವರೆಗೆ ಬಜೆಟ್ ಅಧಿವೇಶನ ನಡೆಯಲಿದೆ ಎಂದು ತಿಳಿಸಿದರು.
ಕಳೆದ ಬಜೆಟ್ನಲ್ಲಿ ನಿಗದಿ ಪಡಿಸಿದ್ದ ಸಂಪನ್ಮೂಲ ಕ್ರೂಢೀಕರಣ ಹಾಗೂ ಯೋಜನಾ ವೆಚ್ಚದಲ್ಲಿ ಗುರಿತಲುಪುವ ವಿಶ್ವಾಸವಿದೆ. ಸಂಪನ್ಮೂಲ ಸಂಗ್ರಹದಲ್ಲಿ ಶೇ.14.5ರಷ್ಟು ಹೆಚ್ಚು ಸಾಧನೆ ಮಾಡುವ ಗುರಿ ಹೊಂದಲಾಗಿದೆ. ಜನವರಿ ಅಂತ್ಯಕ್ಕೆ ಶೇ.14.3ರಷ್ಟು ಗುರಿ ಸಾಧನೆಯಾಗಿದೆ. ಮುಂದಿನ ಎರಡು ತಿಂಗಳ ಕಾಲಾವಕಾಶವಿದ್ದು, ಆ ವೇಳೆಗೆ ಗುರಿ ತಲುಪುವ ವಿಶ್ವಾಸವಿದೆ ಎಂದು ಹೇಳಿದರು.
ಕಳೆದ ಬಜೆಟ್ನಲ್ಲಿ 65 ಸಾವಿರ ಕೋಟಿ ರೂ. ಯೋಜನಾವೆಚ್ಚವನ್ನು ನಿಗದಿ ಪಡಿಸಲಾಗಿತ್ತು. ಜನವರಿ ಅಂತ್ಯದವೇಳೆಗೆ ಶೇ.60ರಷ್ಟು ಸಾಧನೆ ಮಾಡಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಬಾಕಿ ಉಳಿದ ಹಣವನ್ನು ಖರ್ಚು ಮಾಡಲಾಗುತ್ತದೆ ಎಂದರು.
ಬಜೆಟ್ನಲ್ಲಿ ಎಂದಿನಂತೆ ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ವಿದ್ಯುತ್, ಶಿಕ್ಷಣ, ಆರೋಗ್ಯ, ಸಾಮಾಜಿಕ ಕ್ಷೇತ್ರಕ್ಕೆ ಒತ್ತು ನೀಡಲಾಗುತ್ತದೆ ಎಂದು ಅವರು ತಿಳಿಸಿದರು.