ಪಾಟ್ನಾ : ಬಿಜೆಪಿ ಸೇರ್ಪಡೆ ಬಹಿರಂಗಪಡಿಸಿರುವ ಬಿಹಾರ ಸಿಎಂ ಜೀತನ್ ರಾಂ ಮಾಂಝಿ, ಬಿಜೆಪಿ ಸೇರ್ಪಡೆ ಅಲ್ಲಗಳೆಯುವುದಿಲ್ಲ ಎಂದು ತಿಳಿಸಿದ್ದಾರೆ.
ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಯು ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದ ಅವರು ಬಿಜೆಪಿ ಸೇರ್ಪಡೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಬಿಜೆಪಿ ಸೇರ್ಪಡೆ ವಿಚಾರ ಅಲ್ಲಗಳೆಯುವುದಿಲ್ಲ. ಫೆ.20ರವರೆಗೆ ನಾನು ಜೆಡಿಯುನಲ್ಲಿರುತ್ತೇನೆ ಎಂದು ಹೇಳುವ ಮೂಲಕ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ನುಡಿದಿದ್ದಾರೆ.
ಇದೇ ವೇಳೆ ಶಾಸಕಾಂಗ ಪಕ್ಷದ ನಾಯಕರಾಗಿ ನಿತೀಶ್ ಕುಮಾರ್ ಆಯ್ಕೆ ಅಕ್ರಮ ಹಾಗೂ ಕಾನೂನು ಬಾಹೀರವಾಗಿದೆ ಎಂದಿದ್ದಾರೆ. ನಿತೀಶ್ ಕುಮಾರ್, ಶಾಸಕರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ನಡುವೆ ಮಾಂಝಿಗೆ ವಿಶ್ವಾಸಮತ ಸಯಾಚನೆಗೆ ಅವಕಾಶ ನೀಡಿರುವುದನ್ನು ಖಂಡಿಸಿ, ಜೆಡಿಯು ನಾಯಕರು ಪಾಟ್ನಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಮಾಂಝಿಗೆ ಜೆಡಿಯು ಶಾಸಕ ಬೆಂಬಲವಿಲ್ಲ. ಹೀಗಿರುವಾಗ ವಿಶ್ವಾಸಮತ ಯಾಚನೆ ಹೇಗೆ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಫೆ 20ರಂದು ಸಿಎಂ ಜೀತನ್ ರಾಂ ಮಾಂಝಿಯವರಿಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಅವಕಾಶ ನೀಡಿದ್ದರು. ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ಜೆಡಿಯು. ವಿಶ್ವಾಸಮತ ಯಾಚನೆಗೆ ಅವಕಾಶ ನಿಡುವ ಬದಲು ನಿತೀಶ್ ಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದೆ. ಒಟ್ಟಿನಲ್ಲಿ ಬಿಹಾರ ರಾಜಕೀಯ ಬಿಕ್ಕಟ್ಟು ದಿನಕ್ಕೊಂದು ತಿರುವು ಪಡೆದುಕೊಂಡಿದೆ.