ನವದೆಹಲಿ : ಬಿಹಾರದಲ್ಲಿ ಪಕ್ಷದ ನಾಯಕರ ವಿರುದ್ಧವೇ ಸಿಡಿದೆದ್ದಿರುವ ಮುಖ್ಯಮಂತ್ರಿ ಜೀತನ್ ರಾಂ ಮಾಂಝಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ರಾಜೀನಾಮೆ ನೀಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಹಾರದಲ್ಲಿ ಹಿಂದುಳಿದ ವರ್ಗಗಳ ಮತಗಳನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿರುವ ಬಿಜೆಪಿ, ವಿಧಾನಸಭೆಯಲ್ಲಿ ಮಾಂಝಿ ಬಣವನ್ನು ಬೆಂಬಲಿಸಲಿದೆ ಎಂಬ ಸುಳಿವಿನ ಬೆನ್ನಲ್ಲೇ, ಬಿಹಾರ ಸಿಎಂ ನೀಡಿರುವ ಈ ಹೇಳಿಕೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಈ ಊಹಾಪೋಹಕ್ಕೆ ಇಂಬು ನೀಡುವಂತೆ, ಬಿಜೆಪಿ ಸೇರಿದಂತೆ ಯಾರೇ ಬೆಂಬಲ ನೀಡಿದರೂ, ಅದನ್ನು ಸ್ವೀಕರಿಸಲು ಸಿದ್ಧ ಎಂದು ಮಾಂಝಿ ಹೇಳಿಕೊಂಡಿದ್ದಾರೆ. ಅಲ್ಲದೇ, ಸರ್ಕಾರದ ಬಹುಮತ ಸದನ ದಲ್ಲೇ ಆಗಲಿ ಎಂದು ಸವಾಲು ಹಾಕಿದ್ದಾರೆ.
ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಭೇಟಿ ನೀಡಿದ್ದ ಮಾಂಝಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ನಿತೀಶ್ ಕುಮಾರ್ ಒಳ್ಳೆಯ ಮನುಷ್ಯ. ಆದರೆ ಅವರು ಅಧಿಕಾರವಿಲ್ಲದೇ ಇರಲಾರರು ಎಂಬುದು ಸಾಬೀತಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುತ್ತೇನೆ. ಆಗದಿದ್ದರೆ ಅಧಿಕಾರ ತ್ಯಜಿಸುತ್ತೇನೆ. ಶೀಘ್ರದಲ್ಲೇ ಸಂಪುಟ ವಿಸ್ತರಣೆ ಮಾಡಲಿದ್ದು, ಮುಸ್ಲಿಂ ಸೇರಿದಂತೆ ಇಬ್ಬರಿಗೆ ಡಿಸಿಎಂ ಪಟ್ಟ ನೀಡುತ್ತೇನೆ ಎಂದು ಘೋಷಿಸಿದ್ದಾರೆ.
ಈ ಮಧ್ಯೆ, ಸರ್ಕಾರ ರಚನೆಯ ಭಾಗವಾಗಿ ಜೆಡಿಯು, ಆರ್ಜೆಡಿ, ಕಾಂಗ್ರೆಸ್ ನಾಯಕರು ರಾಜಭವನಕ್ಕೆ ಭೇಟಿ ನೀಡಿ, ನಿತೀಶ್ ಅವರಿಗೆ ಇರುವ ಶಾಸಕರ ಬೆಂಬಲ ಪತ್ರವನ್ನು ಹಸ್ತಾಂತರಿಸಿದ್ದಾರೆ. ಅದರ ನಡುವೆ ನಿತೀಶ್ ಜೆಡಿಯು ಶಾಸಕಾಂಗ ಪಕ್ಷದ ನೂತನ ನಾಯಕ ಎಂದು ಸ್ಪೀಕರ್ ಮಾನ್ಯತೆ ನೀಡಿದ್ದಾರೆ.