ನವದೆಹಲಿ : ದೇಶದಲ್ಲಿ ದೆಹಲಿಯಲ್ಲೇ ಅತ್ಯಂತ ಹೆಚ್ಚು ಮತದಾನ ನಡೆಯಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಫೆ.4ರಂದು ಅಂಬೇಡ್ಕರ್ ನಗರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಪ್ರಸ್ತುತ ದೇಶದಲ್ಲಿ ಅತ್ಯಂತ ಹೆಚ್ಚು ಮತದಾನವಾಗಿರುವುದು ಜಮ್ಮು-ಕಾಶ್ಮೀರದಲ್ಲಿ. ಈ ಬಾರಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಜಮ್ಮು-ಕಾಶ್ಮೀರಕ್ಕಿಂತ ಹೆಚ್ಚು ಮತದಾನವಾಗಬೇಕು ಎಂದು ಮೋದಿ ಹೇಳಿದ್ದಾರೆ.
ದೆಹಲಿಯಲ್ಲಿ ಇತ್ತೀಚೆಗಷ್ಟೇ ಬಂದಿರುವ ಸಮೀಕ್ಷೆಗಳ ಬಗ್ಗೆಯೂ ಮಾತನಾಡಿದ ನರೇಂದ್ರ ಮೋದಿ, ಚುನಾವಣಾ ಪೂರ್ವ ಸಮೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಫೆ.10ರಂದು ಪ್ರಕಟವಾಗುವ ಫಲಿತಾಂಶದ ಬಗ್ಗೆ ಚಿಂತಿಸಿ. ಲೋಕಸಭಾ ಚುನಾವಣಾ ಸಮೀಕ್ಷೆಗಳೂ ಹಲವು ಬಾರಿ ಸುಳ್ಳಾಗಿದೆ. ನಾನು ವಾರಾಣಸಿಯಿಂದ ಸ್ಪರ್ಧಿಸಿದ್ದಾಗ ಅಲ್ಲಿ ಗೆಲ್ಲುವುದಿಲ್ಲ ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ ನನ್ನನ್ನು ಅಲ್ಲಿನ ಜನತೆ ದಾಖಲೆಯ ಅಂತರದಿಂದ ಆಯ್ಕೆ ಮಾಡಿದರು. ಆದ್ದರಿಂದ ಸಮೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಜನತೆಗೆ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಫೆ.10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು ಕಿರಣ್ ಬೇಡಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆ. ಆ ಕ್ಷಣದಿಂದಲೇ ದೆಹಲಿಯಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಲಿದೆ. ದೆಹಲಿಯಲ್ಲಿ ಬಡವರಿಗೆ ಮೂಲ ಸೌಕರ್ಯ ನೀಡಬೇಕಿದೆ. ಅವರಿಗಾಗಿ ಮನೆಗಳನ್ನು ನಿರ್ಮಿಸಬೇಕಿದೆ , ಇವೆಲ್ಲವೂ ಸಾಧ್ಯವಾಗುವುದು ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಮಾತ್ರ ಎಂದು ಮೋದಿ ಹೇಳಿದ್ದಾರೆ.
ಇದೇ ವೇಳೆ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಮೋದಿ, ಸ್ವತಃ ಗೆಲಲ್ಲು ಸಾಧ್ಯವಾಗದವರು ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗುವ ಆಕಾಂಕ್ಷಿಗಳಾಗಿದ್ದಾರೆ. ಇದಕ್ಕಾಗಿಯೇ ದೆಹಲಿಯಲ್ಲಿ ಒಡಕು ಮೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ. ಈಶಾನ್ಯ ರಾಜ್ಯಗಳ ಜನರನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟುವ ಮೂಲಕ ಜನರನ್ನು ಒಡೆಯುತ್ತಿದ್ದಾರೆ ಎಂದು ಮೋದಿ ಆರೋಪಿಸಿದ್ದಾರೆ. ಈಶಾನ್ಯ ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಒತ್ತು ನೀಡಿದೆ. ದೇಶದ ಎಲ್ಲಾ ರಾಜ್ಯಗಳು ಸಹೋದರರಿದ್ದಂತೆ, ಅವರ ನಡುವೆ ಸಂಘರ್ಷಕ್ಕೆ ಅವಕಾಶ ನೀಡಬಾರದು ಎಂದಿದ್ದಾರೆ.
ಕೆಲವರು ಮಹಾತ್ಮಾ ಗಾಂಧಿ, ಬರಾಕ್ ಒಬಾಮ ಹಾಗೂ ನನ್ನ ಹೆಸರಿನಲ್ಲೂ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ್ದಾರೆ. ನಮ್ಮದು ಭ್ರಷ್ಟ ಸರ್ಕಾರವಲ್ಲ. ಅಭಿವೃದ್ಧಿಯೊಂದೇ ಬಿಜೆಪಿ ಸರ್ಕಾರದ ಧ್ಯೇಯ ಹಾಗೂ ಮಂತ್ರ ಎಂದು ಮೋದಿ ತಿಳಿಸಿದ್ದಾರೆ. ಈ ಬಾರಿ ದೆಹಲಿಯಲ್ಲಿ ಪೂರ್ಣ ಬಹುಮತದ ಸರ್ಕಾರ ಜಾರಿಗೆ ಬರಬೇಕು, ಆದ್ದರಿಂದ ಹೆಚ್ಚು ಸಂಖ್ಯೆಯಲ್ಲಿ ಮತದಾನ ಮಾಡಿ ಎಂದು ಪ್ರಧಾನಿ ಕರೆ ನೀಡಿದ್ದಾರೆ.