ಬೆಂಗಳೂರು : ಹಟ್ಟಿ ಭಾಗ್ಯ, ಅಣ್ಣ ಇಡ್ಲಿ, ಅಣ್ಣಕಾರುಣ್ಯ ಆರೋಗ್ಯ ಯೋಜನೆ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿರುವುದಾಗಿ ಯೋಜನಾ ಮಂಡಳಿಯ ಉಪಾಧ್ಯಕ್ಷರಾದ ಮಾಜಿ ಕೇಂದ್ರ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಯೋಜನಾ ಮಂಡಳಿಯ ಸಭೆಯಲ್ಲಿ ರಾಜ್ಯ ಸರ್ಕಾರವು ಜನಪರವಾದ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಕುರಿತಂತೆ ಕೈಗೊಳ್ಳಬಹುದಾದ ಹೊಸ ಯೋಜನೆ ಹಾಗೂ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ ಶಿಫಾರಸ್ಸು ಮಾಡಲು ತೀರ್ಮಾನಿಸಿತು ಎಂದು ತಿಳಿಸಿದರು.
ಯೋಜನಾ ಮಂಡಳಿಯು ಕೇವಲ ಯೋಜನೆಗಳ ರಚನೆ ಮಾತ್ರವಲ್ಲದೆ ಅವುಗಳ ಅನುಷ್ಠಾನದ ಮೇಲುಸ್ತುವಾರಿ ಮಾಡಿ ಪ್ರಗತಿ ಪರಿಶೀಲನೆ ನಡೆಸಿ ನ್ಯೂನತೆಗಳನ್ನು ಸರಿಪಡಿಸುವತ್ತ ಸೂಕ್ತ ಕ್ರಮ ಕೈಗೊಳ್ಳಲೂ ಸಹ ಅಧಿಕಾರ ನೀಡುವಂತೆ ಸರ್ಕಾರಕ್ಕೆ ಆಗ್ರಹಪಡಿಸಲಾಗುವುದು ಎಂದು ತಿಳಿಸಿದರು.
ಹಟ್ಟಿ ಭಾಗ್ಯ, ಅಣ್ಣ ಇಡ್ಲಿ, ಅಣ್ಣತಾರುಣ್ಯ ಆರೋಗ್ಯ ಯೋಜನೆ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಂತೆ ರಾಜ್ಯ ಯೋಜನಾ ಮಂಡಳಿಯು ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡಲು ತೀರ್ಮಾನಿಸಿದೆ ಎಂದರು.
ಪ್ರಮುಖವಾಗಿ ರಾಜ್ಯ ಸರ್ಕಾರದಲ್ಲಿ ಹಾಲಿ ಜಾರಿಯಲ್ಲಿರುವ ಯೋಜನೆಗಳಲ್ಲಿ ಸೇರಿಸಲಾಗದ ಕೆಲವೊಂದು ಬುಡಕಟ್ಟು ಜನರ ಆರ್ಥಿಕ ಅಭಿವೃದ್ಧಿ ಮಹಿಳಾ ಸಬಲೀಕರಣ ಹಾಗೂ ಸಾಲದ ಮೇಲಿನ ಸಹಾಯಧನ, ಬಡ್ಡಿ ನೀಡುವ ಸಲುವಾಗಿ ಹಟ್ಟಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸುವಂತೆ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದ ಅವರು ಈ ಯೋಜನೆಯಡಿ ಕೆಲವು ಬುಡಕಟ್ಟು ಜನಾಂಗಗಳಾದ ಕಾಡು ಕುರುಬ, ಹಟ್ಟಿಗೊಲ್ಲ, ಕಾಡುಗೊಲ್ಲ, ಜೇನು ಕುರುಬ, ಬೆಟ್ಟದ ಕುರುಬ, ಹೆಳವ, ಸೋಲಿಗ, ಜೋಗಿ, ಸಿಳ್ಳೆಖ್ಯಾತ, ಬೈಲು ಪತ್ತಾರ್, ಮೇದರ, ಕೊರಚ, ಕೊರಮ, ಮುದ್ದೆಕಮ್ಮಾರ, ಗೊಂದಳ ಹಾಗೂ ಇತರೆ ಜನಾಂಗಳನ್ನು ಈ ಯೋಜನೆಗೆ ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು. ಈ ಯೋಜನೆಯಿಂದಾಗಿ 8 ರಿಂದ 9 ಲಕ್ಷ ಜನರಿಗೆ ಉಪಯೋಗವಾಗಲಿದೆ ಎಂದು ಹೇಳಿದರು.
ಬುಡಕಟ್ಟು ಜನರ ಸಹಭಾಗಿತ್ವದೊಂದಿಗೆ ಅರಣ್ಯ ಪ್ರದೇಶಗಳಲ್ಲಿನ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಕೈಗೊಂಡು ಆರ್ಥಿಕ ಸಬಲೀಕರಣಕ್ಕೆ ಒಳಗೊಳಿಸಬಹುದಾಗಿದೆ. ರಾಜ್ಯದ ಒಟ್ಟಾರೆ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗಳ ಸಂಖ್ಯೆ ಕಡಿಮೆಯಾಗುತ್ತಿದ್ದು ಶ್ರೀಗಂಧ ನಾಡು ಎಂದು ಹೆಸರಾಗಿರುವ ರಾಜ್ಯದಲ್ಲಿ ಶ್ರೀಗಂಧ ಪ್ರಮಾಣ ಹೆಚ್ಚಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅರಣ್ಯದ ಮೂಲ ಸ್ವರೂಪ ಹಾಳಾಗದಂತೆ ಶ್ರೀಗಂಧದ ಪ್ರಮಾಣ ಹೆಚ್ಚಿಸಲು ಚಿಂತಿಸಲಾಗಿದೆ. ಇದರೊಂದಿಗೆ ಸಾಗುವಾನಿ, ಬ್ಲಾಕ್ವುಡ್ಗಳ ಪ್ರಮಾಣ ಹೆಚ್ಚಿಸಲು ಇದೇ ರೀತಿಯ ಯೋಜನೆ ರೂಪಿಸಲು ಚಿಂತಿಸಲಾಗಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಸಂಪೂರ್ಣ ಕ್ರಿಯಾ ಯೋಜನೆ ರಚನೆ ಹಾಗೂ ಅನುಷ್ಠಾನ ಉಸ್ತುವಾರಿ ಹಾಗೂ ಪ್ರಗತಿ ಪರಿಶೀಲನೆಗಾಗಿ ಯೋಜನಾ ಮಂಡಳಿಯು ಅರಣ್ಯ ಇಲಾಖೆಯೊಂದಿಗೆ ಚರ್ಚೆ ನಡೆಸಿದೆ ಎಂದು ಅವರು ಹೇಳಿದರು.
ರಾಜ್ಯದ ಬಹುತೇಕ ಗುಡ್ಡಗಾಡು ಕಣಿವೆ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಒದಗಿಸಲು ಅನುಕೂಲಕರ ವ್ಯವಸ್ಥೆ ಇಲ್ಲದ ಕಾರಣ ಅಂತಹ ಪ್ರದೇಶಗಳಲ್ಲಿ ಒಂದು ಸಮಗ್ರ ಸೌರಶಕ್ತಿ ವಿದ್ಯುತ್ ಪೂರೈಕೆ ಯೋಜನೆಯನ್ನು ಕೈಗೆತ್ತಿಕೊಳ್ಳಲು ಸರ್ಕಾರಕ್ಕೆ ಯೋಜನಾ ಮಂಡಳಿಯು ಶಿಫಾರಸ್ಸು ಮಾಡಲಿದೆ.
ಬಿ.ಪಿ.ಎಲ್. ಕಾರ್ಡುದಾರರಿಗೆ ಜಾರಿಯಲ್ಲಿರುವ ಅನ್ನಭಾಗ್ಯದಂತೆ ಎ.ಪಿ.ಎಲ್. ಕಾರ್ಡುದಾರರಿಗೆ ತಿಂಗಳಿಗೆ 15 ಕೆ,.ಜಿ. ಅಕ್ಕಿ, ಎಣ್ಣೆ, ಬೆಳೆ, ಐಯೋಡೈಸ್ಡ್ ಉಪ್ಪು, ರಿಯಾಯಿತಿ ದರದಲ್ಲಿ ಸರ್ಕಾರ ನೀಡುವಂತೆ ಶಿಫಾರಸ್ಸು ಮಾಡಲಾಗುವುದು. ಇದೇ ರೀತಿಯ ಸೌಲಭ್ಯ ಒದಗಿಸಲು ಯೋಜನೆ ರೂಪಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಿರುವ ಮಂಡಳಿಯು ರಾಜ್ಯ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ಯಾಂಟೀನ್ಗಳಿಂದ ಅಣ್ಣ, ಇಡ್ಲಿ ಯೋಜನೆಯನ್ನು ಜಾರಿಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದ ಅವರು ಈ ಯೋಜನೆಯಡಿ ಕೇವಲ ರೂ. 5 ಕ್ಕೆ 5 ಇಡ್ಲಿ, ಉಪ್ಪಿಟ್ಟು , ಚಿತ್ರಾನ್ನ, ಪುಳಿಯೊಗರೆ, ಮೊಸರನ್ನ ನೀಡುವ ಬಗ್ಗೆ ಆಯ್ದ ನಗರಗಳಲ್ಲಿ ಪ್ರಾಯೋಗಿಕವಾಗಿ ಯೋಜನೆಯನ್ನು ಜಾರಿಗೊಳಿಸಬಹುದಾಗಿದೆ ಎಂದರು. ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿ ನಂತರ ಮೈಸೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು ಹಾಗೂ ಕಲಬುರಗಿ ನಗರಗಳಿಗೆ ವಿಸ್ತರಿಸಲಾಗುವುದು ಎಂದರು.
ಕೇರಳ ಸರ್ಕಾರದ ಕಾರುಣ್ಯ ಬೆನೆವಲೆಂಟ್ ಫಂಡ್ ಮಾದರಿಯಲ್ಲಿ ಲಾಟರಿ ಆಧಾರಿತ ಅಣ್ಣ ಕಾರುಣ್ಯ, ಆರೋಗ್ಯ ಯೋಜನೆಯನ್ನು ನಮ್ಮ ರಾಜ್ಯದಲ್ಲಿ ಅಳವಡಿಸಿಕೊಳ್ಳಲು ಸರ್ಕಾರಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದೆಂದರು. ಈ ಯೋಜನೆಯಡಿ ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವ ಬಡ, ಮಧ್ಯಮ ವರ್ಗದ ರೋಗಿಗಳಿಗೆ ಅನುಕೂಲವಾಗಲಿದೆ ಎಂದ ಅವರು ಈ ಯೋಜನೆಯಡಿ 5 ಲಕ್ಷದ ವರೆಗೂ ವೈದ್ಯಕೀಯ ವೆಚ್ಚ ಭರಿಸುವಂತೆ ಕೋರಲಾಗುವುದು. ವರ್ಷಕ್ಕೆ ಈ ಯೋಜನೆಯಿಂದ ಸರ್ಕಾರಕ್ಕೆ ಸುಮಾರು 500 ಕೋಟಿ ರೂ. ವೆಚ್ಚವಾಗಲಿದೆ ಎಂದು ಅವರು ತಿಳಿಸಿದರು.
ಶಬರಿಮಲೈ ಯಾತ್ರೆ ಸಮಯದಲ್ಲಿ ರಾಜ್ಯದ ಪ್ರದೇಶಗಳಿಂದ ಹೋಗುವ ಯಾತ್ರಾರ್ಥಿಗಳಿಗಾಗಿ ಕೆ.ಎಸ್.ಆರ್.ಟಿ.ಸಿ. ವತಿಯಿಂದ ಶೇ. 50 ರಷ್ಟು ರಿಯಾಯಿತಿ ದರದಲ್ಲಿ ಪ್ರಯಾಣ ದರವನ್ನು ನಿಗದಿಪಡಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಧಾರ್ಮಿಕ ಧತ್ತಿಗೆ ಸಂಬಂಧಿಸಿದ ಸಿ ವರ್ಗದಲ್ಲಿನ ದೇವಸ್ಥಾನದಲ್ಲಿ ಅರ್ಚಕರಿಗೆ ಪ್ರಸ್ತುತ ನೀಡಲಾಗುತ್ತಿರುವ ರೂ. 1400 ಗಳ ವೇತನವನ್ನು ಹೆಚ್ಚಿಸಿ ಕನಿಷ್ಠ ರೂ. 5000 ಗಳ ವೇತನವನ್ನು ನೀಡುವಂತೆ ಮಂಡಳಿಯು ಸರ್ಕಾರಕ್ಕೆ ಶಿಫಾರಸ್ಸು ಮಾಡಲಿದೆ ಎಂದು ಅವರು ತಿಳಿಸಿದರು. ಸುಮಾರು 27,000 ಜನರಿಗೆ ಇದರಿಂದ ಉಪಯೋಗವಾಗಲಿದ್ದು ವರ್ಷಕ್ಕೆ ಸರ್ಕಾರಕ್ಕೆ 110 ಕೋಟಿ ರೂ.ಗಳ ವೆಚ್ಚವಾಗಲಿದೆ ಎಂದು ಅವರು ತಿಳಿಸಿದರು.