ನವದೆಹಲಿ : ಚುನಾವಣಾ ಆಯೋಗ ನೀಡಿರುವ ಎಚ್ಚರಿಕೆಯ ಹೊರತಾಗಿಯೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಓಟಿಗಾಗಿ ನೀಡುವ ಹಣವನ್ನು ತೆಗೆದುಕೊಂಡು ಎಎಪಿಗೇ ಮತ ಹಾಕಿ ಎಂದು ಪುನರುಚ್ಚರಿಸಿದ್ದಾರೆ.
ಈ ಹಿಂದಿನ ಹೇಳಿಕೆಗೆ ಚುನಾವಣೆ ಆಯೋಗವು ಕೇಜ್ರಿವಾಲ್ಗೆ ಇತ್ತೀಚೆಗಷ್ಟೇ, ಈ ಬಗೆಯ ಲಂಚಗುಳಿತನಕ್ಕೆ ಇಂಬು ನೀಡುವ ಹೇಳಿಕೆಯನ್ನು ನೀಡದಂತೆ ಎಚ್ಚರಿಕೆ ನೀಡಿತ್ತು.
ಬಿಜೆಪಿ ಮತ್ತು ಕಾಂಗ್ರೆಸಿಗರು ನಿಮ್ಮ ಬಳಿ ಹಣದೊಂದಿಗೆ ಬಂದಿದ್ದಾರೆಯೆ? ಬಂದಿರುವುದು ಹೌದಾದರೆ ಅವರಿಗೆ ಇಲ್ಲವೆಂದು ಹೇಳಬೇಡಿ. ಅವರು ನಿಮ್ಮ ಓಟಿಗಾಗಿ ನೀಡುವ ನೋಟನ್ನು ತೆಗೆದುಕೊಳ್ಳಿ. ಅವರು ಮತದಾರರಿಗೆ ಕಂಬಳಿಯನ್ನು, ಅಕ್ಕಿ ಚೀಲವನ್ನು ವಿತರಿಸುತ್ತಿದ್ದಾರೆ ಎಂಬುದು ನನಗೆ ಗೊತ್ತು. ಅವೆಲ್ಲವನ್ನೂ ಮತದಾರರು ತೆಗೆದುಕೊಳ್ಳಿ. ಆದರೆ ಒಂದೊಮ್ಮೆ ಅವರು ಸಾರಾಯಿ, ಹೆಂಡವನ್ನು ಕೊಟ್ಟರೆ ಅದನ್ನು ತೆಗೆದುಕೊಳ್ಳಬೇಡಿ. ಏಕೆಂದರೆ ಅದು ಇಡೀ ಕುಟುಂಬವನ್ನೇ ನಾಶ ಮಾಡುತ್ತದೆ ಎಂದು ಕೇಜ್ರಿವಾಲ್ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ.
ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಲಂಚ ಸ್ವೀಕರಿಸುವುದಕ್ಕೆ ಚಿತಾವಣೆ ಮಾಡುವ ಮಾತುಗಳನ್ನು ಆಡಕೂಡದೆಂದು ಚುನಾವಣಾ ಆಯೋಗವು ಕೇಜ್ರಿವಾಲ್ಗೆ ಇತ್ತೀಚೆಗಷ್ಟೇ ಎಚ್ಚರಿಕೆಯನ್ನು ನೀಡಿತ್ತು. ನೊಟೀಸ್ ಕೂಡ ಜಾರಿ ಮಾಡಲಾಗಿತ್ತು. ಆದಾಗ್ಯೂ ಕೇಜ್ರಿವಾಲ್ ತಮ್ಮ ಮಾತುಗಳನ್ನು ಮುಂದುವರಿಸಿದ್ದಾರೆ.