ಬೆಂಗಳೂರು : ತಾವು ಸತ್ಯಹರಿಶ್ಚಂದ್ರರೆಂದು ಹೇಳಿಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ ಒಂದು ಇಂಚು ಭೂಮಿಯನ್ನೂ ಡಿನೋಟಿಫಿಕೇಷನ್ ಮಾಡಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಮಾಡಿರುವುದು ನೂರಾರು ಎಕರೆ ಡಿನೋಟಿಫಿಕೇಷನ್ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಜ.19ರಂದು ಬೆಂಗಳೂರಿನಲ್ಲಿ ಸಿ.ಎಂ ವಿರುದ್ಧ ಡಿನೋಟಿಫಿಕೇಷನ್ ದಾಖಲೆ ಬಿಡುಗಡೆ ಮಾಡಿ ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ, ಸಿ.ಎಂ ಸಿದ್ದರಾಮಯ್ಯ ಒಂದು ಎಕರೆ, ಗುಂಟೆಗಳ ಲೆಕ್ಕದಲ್ಲಿ ಡಿನೋಟಿಫಿಕೇಷನ್ ಮಾಡಿಲ್ಲ, ನೂರಾರು ಎಕರೆಗಳಷ್ಟು ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ. ಸಿದ್ದರಾಮಯ್ಯ ಅವರೊಬ್ಬರೇ ಪ್ರಾಮಾಣಿಕರು ಉಳಿದವರು ಅಪ್ರಾಮಾಣಿಕರು ಎಂದು ಹೆಚ್.ಡಿ.ಕೆ ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದಿದ್ದ ಬಿಡಿಎ ಆಯುಕ್ತರು ಅರ್ಕಾವತಿ ಡಿನೋಟಿಫಿಕೇಷನ್ ಗೆ ಅವಕಾಶ ನೀಡಿದ್ದಾರೆ, ಸಿಎಂ ಸಿದ್ದರಾಮಯ್ಯ ಅದನ್ನು ರೀಡೂ ಮಾಡಿದ್ದಾರೆ ಒಂದು ವೇಳೆ ಸಿದ್ದರಾಮಯ್ಯ ಅವರು ತಪ್ಪು ಮಾಡಿಲ್ಲ ಎಂದಾದರೆ, ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದ ತನಿಖೆ ನಡೆಸುತ್ತಿರುವ ನ್ಯಾ. ಕೆಂಪಣ್ಣ ಸಮಿತಿಗೆ ದಾಖಲೆ ಏಕೆ ನೀಡಿಲ್ಲ ಎಂದು ಹೆಚ್.ಡಿ.ಕೆ ಪ್ರಶ್ನಿಸಿದ್ದಾರೆ.
ತಾವು ಸಿದ್ದರಾಮಯ್ಯ ವಿರುದ್ಧ ದಾಖಲೆಗಳನ್ನು ಸಂಗ್ರಹಿಸಲು ಕಷ್ಟಪಡಬೇಕಾಯಿತು. ದಾಖಲೆಗಳನ್ನು ಸಂಗ್ರಹಿಸಬೇಕಾದರೆ ಅಧಿಕಾರಿಗಳಿಗೆ ಧಮ್ಕಿ ಹಾಕುವ ಪರಿಸ್ಥಿಯನ್ನು ಸಿಎಂ ಸಿದ್ದರಾಮಯ್ಯ ನಿರ್ಮಾಣ ಮಾಡಿದ್ದಾರೆ ಎಂದು ಹೆಚ್.ಡಿ.ಕೆ ಆರೋಪಿಸಿದ್ದಾರೆ.