ಬೆಂಗಳೂರು : ರಾಜ್ಯದಲ್ಲಿ ಇನ್ನೂ ಬಿಜೆಪಿ ಆಡಳಿತ ನಡೆಸುತ್ತಿದ್ದರೆ ಜನತೆಯ ಕೈಗೆ ತಟ್ಟೆಕೊಟ್ಟು ಭಿಕ್ಷೆ ಬೇಡಿಸುತ್ತಿದ್ದರು ಎಂದು ಬಾರೋಗ್ಯ ಸಚಿವ ಯು.ಟಿ.ಖಾದರ್ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ತಾವು ಸೀರೆ, ಸೈಕಲ್ ಕೊಟ್ಟೆವು ಎಂದು ಹೇಳಿಕೊಳ್ಳುತ್ತಿದ್ದಾರೆ. ಒಂದು ವೇಳೆ ಅವರು ಇನ್ನೂ ಅಧಿಕಾರದಲ್ಲಿದ್ದರೆ ರಾಜ್ಯದ ಜನತೆ ಕೈಗೆ ತಟ್ಟೆ ಕೊಟ್ಟು, ಭಿಕ್ಷೆ ಬೇಡಿಸುತ್ತಿದ್ದರು ಎಂದು ವ್ಯಂಗ್ಯವಾಡಿದರು.
ಒಳ್ಳೆಯ ಆಡಳಿತದ ಬಗ್ಗೆ ವಿಪಕ್ಷಗಳು ತಿಳಿದುಕೊಳ್ಳಬೇಕು. ರಾಜ್ಯದಲ್ಲಿ ಸಿದ್ದರಾಮಯ್ಯನವರು ಉತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಜನತೆ ನೆಮ್ಮದಿಯಿಂದಿದ್ದಾರೆ. ಆದರೂ ವಿಪಕ್ಷಗಳು ಸುಮ್ಮನೇ ಆರೋಪ ಮಾಡುತ್ತಿದ್ದಾರೆ. ಸಿಎಂ ಸುದ್ದರಾಮಯ್ಯ ದಿನದ 20 ಗಂಟೆ ಕೆಲಸ ಮಾಡುತ್ತಾರೆ.2 ನಿಮಿಷ ಕಣ್ಣು ಮುಚ್ಚಿದ್ರೆ ಬಿಜೆಪಿ ನಾಯಕರು ಅದನ್ನೇ ದೊಡ್ಡದು ಮಾಡುತ್ತಾರೆ ಎಂದು ಗರಂ ಆದರು.
ದಲಿತ ಸಮುದಾಯದವರು ಸಿಎಂ ಆಗುವ ವಿಚಾರಕ್ಕೆ ಸಂಬಂಧಿಸಿದತೆ ಪ್ರತಿಕ್ರಿಯಿಸಿದ ಖಾದರ್, ಕಾಂಗ್ರೆಸ್ ನಲ್ಲಿ ಎಲ್ಲರಿಗೂ ಸಮಾನ ಅವಕಾಶವಿದೆ. ಸಮಾಜದ ಕಟ್ಟ ಕಟೆದೆಯ ವ್ಯಕ್ತಿಗೂ ಉನ್ನತ ಸ್ಥಾನ ಸಿಗುತ್ತೆ ಎಂದರು.
ಸಧ್ಯ ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಮುಂದೆ ಅವಕಾಶ ಸಿಕ್ಕರೆ ದಲಿತರೂ ಸಿಎಂ ಆಗಬಹುದು. ಕಾಲಕ್ಕೆ ತಕ್ಕಂತೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ ಎಂದು ತಿಳಿಸಿದರು.
ಸ್ಪೀಕರ್ ಕಾಗೋಡು ತಿಮ್ಮಿಪ್ಪ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿಚಾರವಾಗಿ ಮಾತನಾಡಿದ ಅವರು, ನಿರೀಕ್ಷಿಸಿದ ಮಟ್ಟದಲ್ಲಿ ಕೆಲಸವಾಗದಿದ್ದಾಗ ಟೀಕೆ ಮಾಡಿದ್ದಾರೆ. ಅದನ್ನು ಬಿಟ್ಟು ಸರ್ಕಾರದ ಬಗ್ಗೆ ಅವರಿಗೆ ಅಸಮಾಧಾನವಿಲ್ಲ ಎಂದರು. ಕಾಗೋಡು ತಿಮ್ಮಪ್ಪ ತುಂಬಾ ಹಿರಿಯರು. ನನ್ನನ್ನು ಕಂಡರೆ ಅವರಿಗೆ ಅಪಾರ ಪ್ರೀತಿ. ಆರೋಗ್ಯ ಇಲಾಖೆ ಬಗ್ಗೆ ಸಲಹೆ-ಸೂಚನೆ ನೀಡುತ್ತಾರೆ ಎಂದು ಹೇಳಿದರು.