ನವದೆಹಲಿ : ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಬಿಜೆಪಿ ಸೇರಿರುವುದಕ್ಕೆ ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಮುಳುಗುತ್ತಿರುವ ಬಿಜೆಪಿ ದೋಣಿಯನ್ನು ಕಾಪಾಡಲು ಕಿರಣ್ ಬೇಡಿ ಅವರಿಂದ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಅಣ್ಣಾ ಹಜಾರೆ ಅವರೊಂದಿಗೆ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಕಿರಣ್ ಬೇಡಿ, ಅರವಿಂದ್ ಕೇಜ್ರಿವಾಲ್ ಅವರಿಗೆ ಬೆಂಬಲ ನೀಡಿದ್ದರು. ಕಿರಣ್ ಬೇಡಿ ಬಿಜೆಪಿ ಸೇರಿರುವುದಕ್ಕೆ ಪ್ರತಿಕ್ರಿಯಿಸಿರುವ ಅರವಿಂದ್ ಕೇಜ್ರಿವಾಲ್, ಕಿರಣ್ ಬೇಡಿ ಅವರನ್ನು ನಾನು ರಾಜಕೀಯಕ್ಕೆ ಬರುವಂತೆ ಮನವಿ ಮಾಡಿದ್ದೆ. ಆದರೆ ಇಂದು ಅವರು ರಾಜಕೀಯ ಅಖಾಡಕ್ಕೆ ಧುಮುಕಿದ್ದು ಸಂತಸ ಉಂಟು ಮಾಡಿದೆ ಎಂದು ಟ್ವಿಟರ್ ನಲ್ಲಿ ಬರೆದಿದ್ದಾರೆ. ಆದರೆ ಆಮ್ ಆದ್ಮಿ ಪಕ್ಷ ಅಧಿಕೃತವಾಗಿ ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕಿರಣ್ ಬೇಡಿ ಬಿಜೆಪಿಗೆ ಸೇರ್ಪಡೆಗೊಂಡಿರುವುದಕ್ಕೆ ಅಘಾತ ವ್ಯಕ್ತಪಡಿಸಿದೆ.
ಕಿರಣ್ ಬೇಡಿ ಬಿಜೆಪಿಗೆ ಸೇರಿರುವುದು ಆಮ್ ಆದ್ಮಿ ಪಕ್ಷದಲ್ಲಿ ತಳಮಳ ಉಂಟುಮಾಡಿದೆ. ದೆಹಲಿಯಲ್ಲಿ ಸೋಲನ್ನು ಎದುರಿಸಲಿರುವ ಬಿಜೆಪಿಯನ್ನು ಕಿರಣ್ ಬೇಡಿ ಕಾಪಾಡಲು ಸಾಧ್ಯವೇ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.