ನವದೆಹಲಿ : ನಾನೇನು ನಕ್ಸಲ್ನಂತೆ ಕಾಣುತ್ತಿದ್ದೇನಾ? ಎಂದು ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೇಜ್ರಿವಾಲ್, ನಾನೇನು ನಕ್ಸಲ್ನಂತೆ ಕಾಣುತ್ತಿದ್ದೇನಾ? ನಾನು ದೆಹಲಿಯ ಜನರಲ್ಲಿ ಕೇಳಲಚ್ಛಿಸುತ್ತೇನೆ. ನಾನು ಕಾಡಿಗೆ ಹೋಗಲಿ ಎಂದು ಪ್ರಧಾನಿ ಹೇಳುತ್ತಿದ್ದಾರೆ, ದೆಹಲಿಯ ಜನರು ಕೂಡಾ ಇದನ್ನೇ ಬಯಸುತ್ತಾರಾ? ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಕಳೆದ ಶನಿವಾರ ದೆಹಲಿಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅರಾಜಕತಾವಾದಿಯಾಗಿದ್ದವರು ಕಾಡಿಗೆ ಹೋಗಲಿ, ಹೋಗಿ ಅಲ್ಲಿ ನಕ್ಸಲರೊಂದಿಗೆ ಸೇರಿಕೊಳ್ಳಲಿ ಎಂದು ಕೇಜ್ರಿವಾಲ್ ರನ್ನು ಟೀಕಿಸಿದ್ದರು.
ಇದಕ್ಕೆ ಉತ್ತರಿಸಿ ಟ್ವೀಟ್ ಮಾಡಿದ ಕೇಜ್ರಿವಾಲ್, ಇಂಥಾ ರಾಜಕೀಯ ಒಳ್ಳೆಯದಲ್ಲ, ಕೇಜ್ರಿವಾಲ್ ಹೇಗೆ ಇರಲಿ ಆತ ಪ್ರಾಮಾಣಿಕ ವ್ಯಕ್ತಿ. ಆತನ ಉದ್ದೇಶವೂ ಸ್ಪಷ್ಟವಾಗಿದೆ. ನಾವು ಸಮಸ್ಯೆಗಳ ಬಗ್ಗೆ ಮಾತನಾಡಬೇಕಿದೆ ಎಂದಿದ್ದರು.