ನವದೆಹಲಿ : 'ಸ್ವಚ್ಛ ಭಾರತ' ದಂತಯ ಜನಪ್ರಿಯ ಅಭಿಯಾನವನ್ನು ಜಾರಿಗೆ ತಂದಿರುವ ಪ್ರಧಾನಿ ನರೇಂದ್ರ ಮೋದಿ, ಇದೀಗ ಬೇಟಿ ಬಚಾವೋ, ಬೇಟಿ ಪಡಾವೋ (ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ)ಅಭಿಯಾನಕ್ಕೆ ಜ.22ರಂದು ಚಾಲನೆ ನೀಡಲಿದ್ದಾರೆ.
ಹೆಣ್ಣು ಮಕ್ಕಳ ಶಿಕ್ಷಣ, ಅವರ ರಕ್ಷಣೆ, ಭ್ರೂಣ ಹತ್ಯೆ ತಡೆ ಸೇರಿದಂತೆ ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನವನ್ನು ಹಮ್ಮಿಕೊಂಡಿದೆ. ಜ.22ರಂದು ಈ ಅಭಿಯಾನಕ್ಕೆ ಮೋದಿ ಚಾಲನೆ ನೀಡಲಿದ್ದು, ಮೊದಲ ಹಂತದಲ್ಲಿ ದೇಶದ ಹಿಂದುಳಿದ 100 ಜಿಲ್ಲೆಗಳಲ್ಲಿ ಇದು ಚಾಲ್ತಿಗೆ ಬರಲಿದೆ. ಕೇಂದ್ರ ಸರ್ಕಾರ ಬಜೆಟ್ನಲ್ಲಿ ಈ ಯೋಜನೆಗಾಗಿ ನೂರು ಕೋಟಿ ಹಣ ಮೀಸಲಿಟ್ಟಿತ್ತು. 2017ರ ವೇಳೆಗೆ ಹೆಣ್ಣು ಮಕ್ಕಳ ಶಿಕ್ಷಣ, ಪೌಷ್ಠಿಕಾಂಶದ ಕೊರತೆ ನೀಗಿಸುವುದು, ಭ್ರೂಣ ಹತ್ಯೆ ತಡೆ ಸೇರಿದಂತೆ ಕೆಲವು ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಕೇಂದ್ರ ಮಾನವ ಸಂಪನ್ಮೂಲ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಭಾಗಿತ್ವದಲ್ಲಿ ಈ ಅಭಿಯಾನ ಸಾಕಾರಗೊಳ್ಳಲಿದೆ. ಇದರ ಜತೆಗೆ ಎನ್.ಜಿ.ಒ, ನಾಗರಿಕ ಸಮಾಜವು ಪಾಲ್ಗೊಳ್ಳಲಿದೆ. ಅಭಿಯಾನಕ್ಕೆ ಚಾಲನೆ ನೀಡುವ ವೇಳೆ ಹಿಂದುಳಿದ ರಾಜ್ಯಗಳಾದ ಪಶ್ಚಿಮ ಬಂಗಾಳ, ರಾಜಸ್ಥಾನ, ಗುಜರಾತ್, ಹರಿಯಾಣ ಸೇರಿದಂತೆ ಮತ್ತಿತರ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಪುರುಷರಿಗೆ ಸರಿಸಮನಾಗಿ ಬೆಳೆಸುವಂತೆ ನೋಡಿಕೊಳ್ಳುವುದು, ಹೆಣ್ಣು ಮಕ್ಕಳ ಬಗ್ಗೆ ಸಮಾಜದಲ್ಲಿರುವ ಧೋರಣೆಯನ್ನು ಹೋಗಲಾಡಿಸುವುದು, ಅವರನ್ನು ಸಬಲೆಯನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ