ಜೈಪುರ : ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧದ ಕೇಸನ್ನು ಖುಲಾಸೆಗೊಳಿಸಿರುವ ರಾಜಸ್ತಾನ ಹೈಕೋರ್ಟ್, ಸಲ್ಮಾನ್ ಖಾನ್ ನಿರ್ದೋಷಿ ಎಂದು ತೀರ್ಪು ನೀಡಿದೆ.
ಕೆಳ ನ್ಯಾಯಾಲಯ ನೀಡಿದ್ದ ತೀರ್ಪಿಗೆ ಸಲ್ಮಾನ್ ಖಾನ್ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ಮೇ ತಿಂಗಳಲ್ಲಿ ನಡೆಸಿದ್ದ ಕೋರ್ಟ್, ತೀರ್ಪನ್ನು ಕಾಯ್ದಿರಿಸಿತ್ತು. ಈ ಹಿನ್ನಲೆಯಲ್ಲಿ ಇಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ, ಸಲ್ಮಾನ್ ಖಾನ್ ನಿರಪರಾಧಿ ಎಂದು ಹೇಳಿದೆ.
1998ರ ಸೆಪ್ಟೆಂಬರ್ 26 ಮತ್ತು 28ರಂದು ಹಮ್ ಸಾಥ್ ಸಾಥ್ ಹೈ ಚಿತ್ರದ ಚಿತ್ರೀಕರಣ ವೇಳೆ ಜೋಧಪುರದ ಹೊರವಲಯದ ಭಾವದ್ ರಕ್ಷೀತಾರಣ್ಯದಲ್ಲಿ ಕೃಷ್ಣಮೃಗ ಭೇಟೆಯಾಡಿದ್ದಕ್ಕಾಗಿ ಸಲ್ಮಾನ್ ಖಾನ್ ಹಾಗೂ ಇನ್ನಿತರ 7 ಜನರ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಈ ಸಂಬಂಧ ಜೋಧ್ ಪುರ ಸ್ಥಳೀಯ ನ್ಯಾಯಾಲಯದಲ್ಲಿ ದೂರು ಸಲ್ಲಿಸಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಾಲಯ ಐದು ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಿತ್ತು. ತೀರ್ಪಿನ ವಿರುದ್ಧ ಸಲ್ಮಾನ್ ಖಾನ್ ರಾಜಸ್ತಾನ ಹೈಕೋರ್ಟ್ ಗೆ ಮೊರೆ ಹೋಗಿದ್ದರು. ಇಂದು ತೀರ್ಪು ನೀಡಿದ ಹೈಕೋರ್ಟ್ ಸಲ್ಮಾನ್ ಖಾನ್ ರನ್ನು ದೋಷಮುಕ್ತಗೊಳಿಸಿದೆ.