ನವದೆಹಲಿ : ದೆಹಲಿ ಚುನಾವಣೆ ಎದುರಾಗುತ್ತಿದ್ದಂತೆಯೇ ಆಪ್ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಗೆ ಹೊಸ ಸಂಕಷ್ಟ ಎದುರಾಗಿದೆ. ದೆಹಲಿಯ ಮೌಲಿಕ್ ಭಾರತ್ ಎಂಬ ಎನ್.ಜಿ.ಒ ಸಂಸ್ಥೆ ಅರವಿಂದ್ ಕೇಜ್ರಿವಾಲ್ ದೆಹಲಿಯವರಲ್ಲ ಎಂದು ಆರೋಪಿಸಿದೆ.
ಕೇಜ್ರಿವಾಲ್ ಮತದಾರರ ಗುರುತಿನ ಚೀಟಿಯಲ್ಲಿ ತಮ್ಮ ವಿಳಾಸವನ್ನು ಬದಲಿಸಬೇಕೆಂದು ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಆದರೆ ಮೌಲಿಕ್ ಭಾರತ್ ಅರವಿಂದ್ ಕೇಜ್ರಿವಾಲ್ ದೆಹಲಿಯ ನಾಗರಿಕರೇ ಅಲ್ಲ ಎಂದು ಆರೋಪಿಸಿದೆ. ತಿಲಕ್ ಮಾರ್ಗದಿಂದ ಬಿ.ಕೆ ದತ್ ಕಾಲೋನಿಗೆ ತಮ್ಮ ವಿಳಾಸವನ್ನು ಬದಲಾಯಿಸಬೇಕೆಂದು ಅರ್ಜಿಸಲ್ಲಿಸಿರುವ ಅರವಿಂದ್ ಕೇಜ್ರಿವಾಲ್ ಅವರ ಮನವಿಯನ್ನು ತಿರಸ್ಕರಿಸಬೇಕು ಹಾಗೂ ಬಿ.ಕೆ ದತ್ ಕಾಲೋನಿಯಿಂದ ಅವರಿಗೆ ಮತದಾರರ ಗುರುತಿನ ಚೀಟಿ ನೀಡಬಾರದು ಎಂದು ಮೌಲಿಕ್ ಭಾರತ್ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದೆ.
ಇದೇ ವೇಳೆ ಪ್ರತಿಕ್ರಿಯಿಸಿರುವ ದೆಹಲಿ ಬಿಜೆಪಿ ಘಟಕ, ಗಾಜಿಯಾಬಾದ್ ನಿಂದ ಪೊಲೀಸ್ ಭದ್ರತೆ ಪಡೆದಿರುವ ಅರವಿಂದ್ ಕೇಜ್ರಿವಾಲ್, ದೆಹಲಿಯ ನಿವಾಸಿಯಾಗಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದೆ. ಮೌಲಿಕ್ ಭಾರತ್ ಸಹ ಇದೇ ಆಧಾರದಲ್ಲಿ ಆರೋಪ ಮಾಡಿದ್ದು, ಕೇಜ್ರಿವಾಲ್ ಅವರಿಗೆ ದೆಹಲಿಯಲ್ಲಿ ಮತದಾರರ ಗುರುತಿನ ಚೀಟಿ ನೀಡಬಾರದೆಂದು ಮನವಿ ಸಲ್ಲಿಸಿದೆ.
ಎನ್.ಜಿ.ಒ ಆರೋಪಕ್ಕೆ ಪ್ರತಿಕ್ರಿಯಿಸಿರುವ ಆಪ್, ಕಳೆದ 8-10ದಿನಗಳ ಹಿಂದೆಯೇ ನಾವು ವಿಳಾಸ ಬದಲಾವಣೆಗಾಗಿ ಅರ್ಜಿ ಸಲ್ಲಿಸಿದ್ದೇವೆ. ಈ ಹಿಂದೆ ರಫಿ ಮಾರ್ಗದಲ್ಲಿರುವ ವಿಠಲ್ ಭಾಯ್ ಪಟೇಲ್ ಹೌಸ್ ಗೆ ವಿಳಾಸ ಬದಲಾವಣೆ ಮಾಡಬೇಕೆಂದು ಮನವಿ ಮಾಡಲಾಗಿತ್ತು. ಆದರೆ ಪಕ್ಷದ ಕಚೇರಿ ವಿಳಾಸವನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಹೇಳಿದ್ದ ಹಿನ್ನೆಲೆಯಲ್ಲಿ ಬಿ.ಕೆ ದತ್ ಕಾಲೋನಿಯಲ್ಲಿ ಪಕ್ಷಕ್ಕೆ ಸಂಬಂಧಿಸಿದ ಕಚೇರಿಯ ಒಂದು ಭಾಗದಲ್ಲಿ ಅರವಿಂದ್ ಕೇಜ್ರಿವಾಲ್ ತಂಗುವುದರಿಂದ ಬಿ.ಕೆ ದತ್ ಕಾಲೋನಿಗೆ ವಿಳಾಸ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದೇವೆ ಎಂದು ಸಮರ್ಥನೆ ನೀಡಿದೆ.
ಆದರೆ ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರಿಂದ ಭದ್ರತೆ ಪಡೆದಿರುವ ಕೇಜ್ರಿವಾಲ್, ದೆಹಲಿಯ ನಿವಾಸಿ ಹೇಗಾಗುತ್ತಾರೆ ಎಂಬುದು ಬಿಜೆಪಿ ಹಾಗೂ ಮೌಲಿಕ್ ಭಾರತ್ ನ ಪ್ರಶ್ನೆಯಾಗಿದೆ.