ನವದೆಹಲಿ : ಸುನಂದಾ ಪುಷ್ಕರ್ ಹಂತಕ ಯಾರೆಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿಗೆ ಗೊತ್ತಿದ್ದರೆ ಬಹಿರಂಗಪಡಿಸಲಿ ಎಂದು ಮಾಜಿ ಕೇಂದ್ರ ಸಚಿವ ಶಶಿ ತರೂರ್ ತಿರುಗೇಟು ನೀಡಿದ್ದಾರೆ.
ಸುಖಾ ಸುಮ್ಮನೆ ಆರೋಪ ಮಾಡುತ್ತಿರುವ ಸ್ವಾಮಿಗೆ ಬಹಿರಂಗ ಸವಾಲು ಹಾಕಿರುವ ಶಶಿ ತರೂರ್ ಸ್ವಾಮಿಗೆ ಸುನಂದಾ ಹಂತಕರು ಯಾರೆಂದು ತಿಳಿದಿದ್ರೆ ಪೊಲೀಸರ ಮುಂದೆ ಬಹಿರಂಗ ಪಡಿಸಲಿ ಎಂದಿದ್ದಾರೆ. ಪ್ರಕರಣದ ಬಗ್ಗೆ ಹೇಳಿಕೆ ನೀಡಲು ಸ್ವಾಮಿ ಯಾರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸುಬ್ರಮಣಿಯನ್ ಸ್ವಾಮಿ, ಸುನಂದಾರನ್ನು ಶಶಿ ತರೂರ್ ಕೊಲೆ ಮಾಡಿದ್ದಾರೆಂದು ನಾನು ಹೇಳಿಲ್ಲ, ಆದರೆ ಶಶಿ ತರೂರ್ಗೆ ಹಂತಕರು ಯಾರೆಂದು ಗೊತ್ತಿದೆ. ಶಶಿ ತರೂರ್ ಬಾಯಿಬಿಟ್ಟರೆ ಏಳು ನಾಯಕರು ಸಿಕ್ಕಿಬೀಳುತ್ತಾರೆ ಎಂದು ಹೇಳಿದ್ದಾರೆ.
ತರೂರ್, ಪ್ರಕರಣವನ್ನು ಮುಚ್ಚಿಹಾಕಲು ಸುಳ್ಳುಗಳ ಕಂತೆಯನ್ನು ಸೃಷ್ಟಿಸಿದ್ದಾರೆ ಎಂದು ಸ್ವಾಮಿ ಶನಿವಾರ ಆರೋಪಿಸಿದ್ದರು. ತರೂರ್ಗೆ ಸುನಂದಾರನ್ನು ಕೊಲೆ ಮಾಡಿದ್ದು ಯಾರೆಂದು ಗೊತ್ತಿದ್ದು, ಹತ್ಯೆಗೆ ನೆರವಾಗಿದ್ದಾರೆ. ಅವರು ಸುಳ್ಳುಗಳನ್ನು ಹೇಳುವ ಮೂಲಕ ಪ್ರಕರಣ ಮುಚ್ಚಲು ಪ್ರಯತ್ನಿಸಿದ್ದರಿಂದ ಅವರನ್ನು ಕೂಡ ಜೈಲಿಗೆ ಕಳಿಸಬೇಕು, ಆದರೆ ಮರಣ ದಂಡನೆ ಇರುವುದಿಲ್ಲ ಎಂದು ಹೇಳಿದ್ದರು.