ಇಸ್ಲಾಮಾಬಾದ್ : 'ಕಾಶ್ಮೀರ ವಿವಾದ'ವನ್ನು ಬದಿಗಿಟ್ಟು ಭಾರತದೊಂದಿಗೆ ಮಾತುಕತೆ ನಡೆಸುವುದು ಅಸಾಧ್ಯ ಎಂದು ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಸ್ಪಷ್ಟಪಡಿಸಿದ್ದಾರೆ.
ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಕೆರ್ರಿಯೊಂದಿಗೆ ಮಾತುಕತೆ ನಡೆಸಿದ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸರ್ತಾಜ್ ಅಜೀಜ್, ಕಳೆದ ವರ್ಷ ನರೇಂದ್ರ ಮೋದಿ ಸರ್ಕಾರ, ಕಾಶ್ಮೀರದ ವಿಷಯಕ್ಕೆ ಸಂಬಂಧಿಸಿದಂತೆ ಪಾಕ್ ನೊಂದಿಗೆ ಮಾತುಕತೆ ರದ್ದುಗೊಳಿತ್ತು. ಭಾರತ ಪಾಕಿಸ್ತಾನದೊಂದಿಗೆ ಸೌಹಾರ್ದಯುತ ಮಾತುಕತೆ ನಡೆಸಲು ಸಿದ್ಧವಿಲ್ಲ ಎಂಬುದು ಈ ಮೂಲಕ ತಿಳಿಯುತ್ತದೆ ಎಂದು ಸರ್ತಾಜ್ ಅಭಿಪ್ರಾಯಪಟ್ಟಿದ್ದಾರೆ.
ಕಾಶ್ಮೀರ ವಿವಾದವನ್ನು ಬದಿಗಿರಿಸಿ ಭಾರತದೊಂದಿಗೆ ಪಾಕಿಸ್ತಾನ ಎಂದಿಗೂ ಮಾತುಕತೆ ನಡೆಸುವುದಿಲ್ಲ, ಮಾತುಕತೆ ನಡೆದರೆ ಕಾಶ್ಮೀರ ವಿಷಯವನ್ನೂ ಇತ್ಯರ್ಥಗೊಳಿಸಬೇಕೆಂದು ಅಜೀಜ್ ಹೇಳಿದ್ದಾರೆ.
ಪಾಕಿಸ್ತಾನ-ಭಾರತದ ನಡುವೆ ಸೌಹಾರ್ದಯುತ ಸಂಬಂಧವನ್ನು ವೃದ್ಧಿಸುವ ನಿಟ್ಟಿನಲ್ಲಿ ಕೆರ್ರಿ ಸಾಕಷ್ಟು ಹೇಳಿಕೆ ನೀಡುತ್ತಿದ್ದಾರೆ. ಇಸ್ಲಾಮಾಬಾದ್ ಗೆ ಭೇಟಿ ನೀಡಿ ಮಾತನಾಡಿದ್ದ ಕೆರ್ರಿ, ಉಗ್ರರ ನಿಗ್ರಹ ಹೋರಾಟದಲ್ಲಿ ಭಾರತ-ಪಾಕ್ ಜಂಟಿಯಾಗಲಿ. ಭಾರತ-ಪಾಕ್ ಜಂಟಿ ಕಾರ್ಯಾಚರಣೆ ನೋಡಲು ನಾವು ಉತ್ಸುಕರಾಗಿದ್ದೇವೆ ಎಂದು ತಿಳಿಸಿದ್ದರು. ಪಾಕ್ ಗೆ ಎಲ್ಲಾ ರೀತಿಯ ನೆರವು ನೀಡಲು ಅಮೆರಿಕ ಸಿದ್ಧ. ಭಾಂಧವ್ಯ ವೃಧಿ ಹಾದಿಯಲ್ಲಿ ಮತ್ತಷ್ಟು ಚರ್ಚೆಯಾಗುವ ಅಗತ್ಯವಿದೆ ಎಂದು ಹೇಳಿದ್ದರು. ಆದರೆ ಕೆರ್ರಿ ಸಲಹೆಗೆ ಜಗ್ಗದ ಪಾಕಿಸ್ತಾನ ಕಾಶ್ಮೀರ ವಿವಾದವನ್ನು ಮತ್ತೆ ಪ್ರಸ್ತಾಪಿಸಿದೆ.