ಜಮ್ಮು-ಕಾಶ್ಮೀರ : 'ಜಮ್ಮು-ಕಾಶ್ಮೀರ'ದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರ ರಚಿಸುವುದಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಸ್ಪಷ್ಟಪಡಿಸಿದೆ.
ಕಣಿವೆ ರಾಜ್ಯದಲ್ಲಿ ಸರ್ಕಾರ ರಚನೆ ಬಿಕ್ಕಟ್ಟು ಬಗೆಹರಿಯದ ಕಾರಣ ರಾಜ್ಯಪಾಲರ ಆಡಳಿತ ಹೇರಲಾಗಿದ್ದು ಸರ್ಕಾರ ರಚನೆ ಕಸರತ್ತು ಮುಂದುವರೆದಿದೆ. ಸರ್ಕಾರ ರಚನೆ ಬಗ್ಗೆ ಪ್ರತಿಕ್ರಿಯಿಸಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡ ಮಹಮದ್ ಅಕ್ಬರ್ ಲೋನೆ, ಎನ್.ಸಿ ಯಾವುದೇ ಕಾರಣಕ್ಕೂ ಬಿಜೆಪಿಯೊಂದಿಗೆ ಕೈ ಜೋಡಿಸುವುದಿಲ್ಲ ಎಂದು ಹೇಳಿದ್ದಾರೆ.
'ಬಿಜೆಪಿ ಕೋಮುವಾದ ಪಕ್ಷವಾಗಿದ್ದು, ತಮ್ಮ ಪಕ್ಷದ ನೀತಿಗಳಿಗೂ, ಆ ಪಕ್ಷದ ನೀತಿಗಳಿಗೂ ಬಹಳಷ್ಟು ವ್ಯತ್ಯಾಸವಿದೆ. ಜಮ್ಮು-ಕಾಶ್ಮೀರದ ಜನತೆ ಇಂತಹ ಪಕ್ಷದೊಂದಿಗೆ ಮುನ್ನಡೆಯಲು ಇಚ್ಛಿಸುವುದಿಲ್ಲ ಹೀಗಾಗಿ ಬಿಜೆಪಿಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಪಿಡಿಪಿಯೊಂದಿಗೆ ಸರ್ಕಾರ ರಚನೆ ಮಾಡಲು ಎನ್.ಸಿ ಸಿದ್ಧವಿದೆ ಎಂದು ಮಹಮದ್ ಅಕ್ಬರ್ ಲೋನೆ ತಿಳಿಸಿದ್ದಾರೆ.
'ಪಿಡಿಪಿ ಪಕ್ಷದ ನೀತಿಗಳು ನಮ್ಮ ನಿಲುವಿಗೆ ಹತ್ತಿರವಾಗಿದೆ. ಹೀಗಾಗಿ ಅವರು ಬಯಸಿದರೆ ನಾವು ಪಿಡಿಪಿಗೆ ಬೆಂಬಲ ನೀಡಲು ಸಿದ್ಧ. ಈ ಬಗ್ಗೆ ಮಾತುಕತೆಗಳು ನಡೆಯುತ್ತಿದೆ' ಎಂದು ತಿಳಿಸಿದ್ದಾರೆ.
ಎನ್.ಸಿ ಸೋಲಿನ ಬಗ್ಗೆ ಈಗಾಗಲೇ ಹಿರಿಯ ಮುಖಂಡರೊಂದಿಗೆ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಉಂಟಾಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.