ನವದೆಹಲಿ : 'ದೆಹಲಿ ಚುನಾವಣೆ' ಎದುರಿಸಲು ಸಜ್ಜುಗೊಂಡಿರುವ ಆಮ್ ಆದ್ಮಿ ಪಕ್ಷ ಹೊಸ ವಿವಾದದಲ್ಲಿ ಸಿಲುಕಿಕೊಂಡಿದೆ. ದೆಹಲಿಯ ಕಂಟೋನ್ಮೆಂಟ್ ಬೋರ್ಡ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಗಾಳಿಯಲ್ಲಿ ಹಣದ ನೋಟುಗಳನ್ನು ತೂರುವ ಮೂಲಕ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದ್ದಾನೆ.
ಗೆಲುವಿನ ಬಳಿಕ ಕಚೇರಿ ಬಳಿ ನಡೆದ ಸಂಭ್ರಮಾಚರಣೆ ವೇಳೆ ಇಬ್ಬರು ಕಾರ್ಯಕರ್ತರು ಹಣದ ಕಂತೆಯನ್ನು ತೆಗೆದು ನೋಟುಗಳನ್ನು ಗಾಳಿಯಲ್ಲಿ ತೂರಿದ್ದಾರೆ. ಇದನ್ನು ಮಾಧ್ಯಮಗಳು ಚಿತ್ರೀಕರಿಸಿಕೊಂಡಿದ್ದು, ಆಪ್ ಕಾರ್ಯಕರ್ತರ ಈ ನಡವಳಿಕೆಗೆ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿದೆ. ದೆಹಲಿಯಲ್ಲಿ ಚುನಾವಣೆ ಘೋಷಣೆಯಾಗುವ ಮುನ್ನ ಈ ಘಟನೆ ನಡೆದಿರುವುದು ಆಮ್ ಆದ್ಮಿ ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗಿದೆ.
ಹಣವನ್ನು ಗಾಳಿಯಲ್ಲಿ ತೂರುವ ಮೂಲಕ ಸಂಭ್ರಮಾಚರಣೆ ಮಾಡಿದ್ದ ಕಾರ್ಯಕರ್ತರನ್ನು ಆಮ್ ಆದ್ಮಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಪಕ್ಷದ ನೀತಿ ವಿರುದ್ಧ ನಡೆದುಕೊಂಡ ಹಿನ್ನಲೆಯಲ್ಲಿ ಈ ಇಬ್ಬರು ಕಾರ್ಯಕರ್ತರನ್ನು ಉಚ್ಛಾಟಿಸಲಾಗಿದೆ ಎಂದು ದೆಹಲಿ 'ಆಪ್' ಘಟಕ ಸ್ಪಷ್ಟನೆ ನೀಡಿದೆ.
ದೆಹಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಚುನಾವಣೆಗೆ ಸಿದ್ಧವಾಗುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ಈ ಘಟನೆ ತೀವ್ರ ಮುಜುಗರವನ್ನುಂಟು ಮಾಡಿದೆ.