ಇಸ್ಲಾಮಾಬಾದ್ : 'ಪಾಕಿಸ್ಥಾನ'ದ ಮೇಲೆ ದಾಳಿ ನಡೆಸಲು ಭಾರತ ಆಫ್ಘಾನಿಸ್ಥಾನವನ್ನು ಬಳಸಿಕೊಳ್ಳುತ್ತಿದೆ ಎಂದು ಪಾಕ್ ಪ್ರಧಾನಿಯ ವಿದೇಶಾಂಗ ವ್ಯವಹಾರ ಮತ್ತು ರಕ್ಷಣಾ ಸಲಹೆಗಾರ ಸರ್ತಾಜ್ ಅಜೀಜ್ ಆರೋಪ ಮಾಡಿದ್ದಾರೆ.
ತಮ್ಮ ಭೂಮಿಯನ್ನು ಪರಸ್ಪರ ವಿರುದ್ಧವಾಗಿ ಬಳಸಿಕೊಳ್ಳದಂತೆ ಪಾಕ್-ಆಪ್ಘಾನಿಸ್ಥಾನದ ಒಪ್ಪಂದ ನಡೆದ ನಂತರ ಭಾರತದ ದಾಳಿ ಕಡಿಮೆಯಾಗಿದೆ. ಆದರೂ ಸಹ ಪಾಕಿಸ್ಥಾನದ ಮೇಲೆ ದಾಳಿ ನಡೆಸಲು ಭಾರತ ಆಫ್ಘಾನಿಸ್ಥಾನವನ್ನು ಬಳಸಿಕೊಳ್ಳುತ್ತಿದೆ ಎಂದು ಸರ್ತಾಜ್ ಗಂಭೀರ ಆರೋಪ ಮಾಡಿದ್ದಾರೆ.
ಪಾಕಿಸ್ಥಾನದ ಡಾನ್ ಟಿವಿ ವಾಹಿನಿಗೆ ಸಂದರ್ಶನ ನೀಡಿದ ವೇಳೆ ಸರ್ತಾಜ್ ಭಾರತದ ವಿರುದ್ಧ ಆರೋಪ ಮಾಡಿದ್ದು ನರೇಂದ್ರ ಮೋದಿ ಸರ್ಕಾರ ಭಾರತ-ಪಾಕಿಸ್ತಾನ ನಡುವಿನ ಸೌಹಾರ್ದಯುತ ಮಾತುಕತೆಗೆ ಅವಕಾಶ ನೀಡುತ್ತಿಲ್ಲ ಎಂದು ಟೀಕಿಸಿದ್ದಾರೆ.
ಭಾರತ ಹಾಗೂ ಪಾಕಿಸ್ಥಾನದ ನಡುವಿನ ಮಾತುಕತೆ ಮುರಿದುಬೀಳಲು ನರೇಂದ್ರ ಮೋದಿ ಅವರ ನೀತಿಗಳೇ ಕಾರಣ ಎಂದಿರುವ ಸರ್ತಾಜ್, ಉಭಯ ದೇಶಗಳ ನಡುವೆ ಮಾತುಕತೆ ಮುಂದುವರೆಸಲು ಮೋದಿ ವಿಧಿಸಿರುವ ಷರತ್ತುಗಳಲ್ಲಿ ಪಾಕಿಸ್ತಾನಕ್ಕೆ ಒಪ್ಪಿಗೆಯಾಗದ ವಿಷಯಗಳಿವೆ ಎಂದು ಹೇಳಿದ್ದಾರೆ.