ನವದೆಹಲಿ : ಕಾಶ್ಮೀರ ಸಮಸ್ಯೆ ಮತ್ತು ಹುರಿಯತ್ ನಾಯಕರನ್ನು ಮೂರನೇ ವ್ಯಕ್ತಿಗಳಾಗಿ ಮಾತುಕತೆಗೆ ಪಾಕಿಸ್ತಾನ ಒತ್ತಾಯಿಸಿದರೆ, ಪಾಕಿಸ್ತಾನದ ಜೊತೆ ಮಾತುಕತೆ ಇಲ್ಲ ಎಂದು ಶನಿವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಭಾರತ-ಪಾಕಿಸ್ತಾನ ರಾಷ್ಟ್ರೀಯ ಭದ್ರತೆಗೆ ಸಲಹೆಗಾರರು ಮಧ್ಯೆ ಮಾತುಕತೆ ಕೇವಲ ಭಯೋತ್ಪಾದನೆ ಕುರಿತು ಗಮನ ಹರಿಸಬೇಕು ಎಂದು ಹೇಳಿದರು.
ಸಿಮ್ಲಾ ಒಪ್ಪಂದದ ಪ್ರಕಾರ ಮಾತುಕತೆಯಲ್ಲಿ ಮೂರನೇ ವ್ಯಕ್ತಿಗಳು ಭಾಗವಹಿಸಬಾರದು ಮತ್ತು ಉಫಾ ಹೇಳಿಕೆಯಂತೆ ಭಯೋತ್ಪಾದನೆ ಕುರಿತು ಮಾತ್ರ ಮಾತುಕತೆ ನಡೆಯಬೇಕೆಂದು ಹೇಳಿದರು.
ಪಾಕಿಸ್ತಾನ ಕಾಶ್ಮೀರದ ಸಮಸ್ಯೆ ಪ್ರಮುಖವಾದದ್ದು ಎಂದು ಹೇಳುತ್ತಿದೆ. ಆದರೆ ಉಫಾದಲ್ಲಿ ಅವರು ಇದನ್ನು ಹೇಳಿರಲಿಲ್ಲ. ಮೊದಲು ಭಯೋತ್ಪಾದನೆ ಕುರಿತು ಮಾತುಕತೆ ನಂತರ ಕಾಶ್ಮೀರ ಸಮಸ್ಯೆ ಎಂದು ಸುಷ್ಮಾ ಸ್ವರಾಜ್ ಹೇಳಿದರು.
ಪಾಕಿಸ್ತಾನ ರಾಷ್ಟ್ರೀಯ ಭದ್ರತೆಗೆ ಸಲಹೆಗಾರ ಸರ್ತಾಜ್ ಅಜೀಜ್ ಮತ್ತು ಭಾರತದ ರಾಷ್ಟ್ರೀಯ ಭದ್ರತೆಗೆ ಸಲಹೆಗಾರ ಅಜಿತ್ ದೊವೆಲ್ ನಡುವೆ ಆ.23-24 ರಂದು ಮಾತುಕತೆ ನಿಗದಿಯಾಗಿದೆ.
ಒಂದು ವೇಳೆ ಪಾಕಿಸ್ತಾನ ಮಾತುಕತೆಯಲ್ಲಿ ಕಾಶ್ಮೀರ ಸಮಸ್ಯೆಯನ್ನು ಸೇರಿಸಲು ಒತ್ತಾಯಿಸಿದರೆ ಭಾರತದ ನಡೆ ಏನು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಷ್ಮಾ ಸ್ವರಾಜ್, ಮಾತುಕತೆ ನಡೆಯುವುದಿಲ್ಲ ಎಂದು ಹೇಳಿದರು.
ಬಂದು ಭಯೋತ್ಪಾದನೆಯ ಕುರಿತು ಮಾತನಾಡಿ, ನಾವು ನಿಮ್ಮನ್ನು ಸ್ವಾಗತಿಸುತ್ತೇವೆ ಎಂದು ಸಚಿವೆ ಹೇಳಿದರು.
ಪಾಕಿಸ್ತಾನದ ನಾಯಕರು ದೇಶೀಯ ಒತ್ತಡಗಳಿಗೆ ದುರ್ಬಲರಾಗಿದ್ದಾರೆ, ಮಾತುಕತೆಯಿಂದ ತಪ್ಪಿಸಿಕೊೞಲು ಪ್ರಯತ್ನಿಸುತ್ತಿದ್ದಾರೆ. ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಅವರ್ ಉಫಾ ಹೇಳಿಕೆ, ಅವರು ದೇಶಕ್ಕೆ ವಾಪಾಸಾದ ನಂತರ ಚರ್ಚೆಗೆ ಕಾರಣವಾಯಿತು. ನಂತರ ಎನ್ ಎಸ್ ಎ ಮಟ್ಟದ ಮಾತುಕತೆ ತಡೆಯಲು ಪ್ರಯತ್ನ ನಡೆಯುತ್ತಿದೆ ಎಂದು ಸುಷ್ಮಾ ಸ್ವರಾಜ್ ಹೇಳಿದರು.