ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಆಪ್ ವಿರುದ್ಧ ಟೀಕಾ ಪ್ರಹಾರ ಮಾಡಿರುವುದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಬಿಜೆಪಿಗೆ ನಡುಕ ಇದೆ ಎಂದಿದ್ದಾರೆ.
ರ್ಯಾಲಿಯಲ್ಲಿ ಬಿಜೆಪಿ ನಾಯಕರನ್ನು ನೋಡಿದರೆ ಅವರ ಪಕ್ಷಕ್ಕೆ ನಡುಕವಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಅದೇ ವೇಳೆ ದೆಹಲಿಗಾಗಿ ಬಿಜೆಪಿಯಲ್ಲಿ ಪಾಸಿಟಿವ್ ಅಜೆಂಡಾ ಯಾವುದೂ ಇಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಬಿಜೆಪಿ ಸರ್ಕಾರ ಯು-ಟರ್ನ್ ಸರ್ಕಾರ ಎಂದು ಆರೋಪಿಸಿದ ಕೇಜ್ರಿವಾಲ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿ ಹಲವಾರು ಭರವಸೆಗಳನ್ನು ನೀಡಿತ್ತು. ಬಿಜೆಪಿಯವರು ಬರೀ ಭರವಸೆಗಳನ್ನು ನೀಡುತ್ತಿದ್ದಾರೆ. ಜನರೆಲ್ಲರೂ ಬಿಜೆಪಿಯದ್ದು ಯು ಟರ್ನ್ ಸರ್ಕಾರ ಎಂದು ಹೇಳುತ್ತಾರೆ. ಒಂದು ವೇಳೆ ಎರಡು ತಿಂಗಳಲ್ಲಿ ಹೊಸ ಚುನಾವಣೆ ಬಂದರೆ, ಆವಾಗಲೂ ಬಿಜೆಪಿ ಹೊಸ ಭರವಸೆಗಳನ್ನು ನೀಡಿ ಹಳೆಯದನ್ನು ಮರೆತು ಬಿಡುತ್ತದೆ ಎಂದಿದ್ದಾರೆ.
ಬಿಜೆಪಿಯವರು ನನ್ನನ್ನು ಸುಳ್ಳುಗಾರ, ಅರಾಜಕತಾವಾದಿ ಎಂದು ಕರೆದರು. ಇದು ಅವರ ಮಟ್ಟವನ್ನು ತೋರಿಸುತ್ತದೆ. ನಾವೆಂದೂ ಇಂಥಾ ಪದಗಳನ್ನು ಬಳಸಿಲ್ಲ ಎಂದು ಕೇಜ್ರಿವಾಲ್ ಮೋದಿ ವಿರುದ್ಧ ಕಿಡಿಕಾರಿದ್ದಾರೆ.