ಹೈದರಾಬಾದ್ : ಇತ್ತೀಚಿನ ದಿನಗಳಲ್ಲಿ ಕೆಲ ಸಂಸದರು ನೀಡುತ್ತಿರುವ ಹೇಳಿಕೆಯಿಂದ ಪಕ್ಷದ ಪ್ರತಿಷ್ಠೆ ಹಾಳಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ ಗೆ ಭೇಟಿ ನೀಡಿ ಮಾತನಾಡಿದ ಅಮಿತ್ ಶಾ, ಮರುಮತಾಂತರ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಪಕ್ಷದ ಕೆಲ ಸಂಸದರು ನೀಡುತ್ತಿರುವ ಹೇಳಿಕೆಯಿಂದಾಗಿ ಪಕ್ಷದ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ ಎಂದು ಹೇಳಿದ್ದಾರೆ.
ಸಾರ್ವಜನಿಕವಾಗಿ ಮಾತನಾಡಬೇಕಾದರೆ ಬಿಜೆಪಿ ಸಂಸದರು ಎಚ್ಚರಿಕೆಯಿಂದ ಇರಬೇಕು, ಮನಬಂದಂತೆ ಹೇಳಿಕೆ ನೀಡುವುದು ಸೂಕ್ತವಲ್ಲ, ಇದರಿಂದಾಗಿ ಪಕ್ಷ ತಲೆತಗ್ಗಿಸುವಂತಾಗಲಿದ್ದು, ಯೋಚನೆ ಮಾಡಿ ಹೇಳಿಕೆಗಳನ್ನು ನೀಡುವಂತೆ ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ.
ಮರುಮಂತಾಂತರದ ಬಗ್ಗೆಯೂ ಮಾತನಾಡಿದ ಅಮಿತ್ ಶಾ, ಈ ಬಗ್ಗೆ ಸಮಗ್ರ ಹಾಗೂ ಪ್ರಬಲ ಕಾನೂನು ಜಾರಿಯಾಗಬೇಕಿದೆ. ಆದರೆ, ಇದಕ್ಕೆ ಬೆಂಬಲ ಸೂಚಿಸಲು ಯಾವುದೇ ಜ್ಯಾತ್ಯಾತೀತ ಪಕ್ಷಗಳು ಮುಂದೆ ಬಾರದಿರುವುದು ದುರಾದೃಷ್ಟಕರ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಚರ್ಚೆಗಳಿಂದ ಮತಾಂತರ ನಿಲ್ಲಿಸಲು ಸಾಧ್ಯವಿಲ್ಲ, ದೇಶವನ್ನು ಮುನ್ನಡೆಸುತ್ತಿರುವುದು ಕಾನೂನೋ ಅಥವಾ ಮಾಧ್ಯಮಗಳೋ ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ. ಕಾನೂನು ದೇಶವನ್ನು ಮುನ್ನಡೆಸುತ್ತಿದೆ ಎಂದಾದರೆ ಮತಾಂತರ ಕುರಿತ ಬಲವಾದ ಶಾಸನದ ಅಗತ್ಯವಿದೆ ಎಂದು ಹೇಳಿದ್ದಾರೆ.