ಕಠ್ಮಂಡು : ಭೀಕರ ಭೂಕಂಪಕ್ಕೆ ತುತ್ತಾಗಿರುವ ನೇಪಾಳದ ಸ್ಥಿತಿಗೆ ವಿಶ್ವಮಟ್ಟದಲ್ಲಿ ಸಹಾನುಭೂತಿ ದೊರೆಯುತ್ತಿದೆ. ಆದರೆ ಕ್ರಿಶ್ಚಿಯನ್ ಮಿಷನರಿನರಿಗಳು ಮಾತ್ರ ಭೂಕಂಪದಲ್ಲೂ ತಮ್ಮ ಮತಾಂತರ ಕಾರ್ಯವನ್ನು ಸಾಂಗವಾಗಿ ನಡೆಸಲು ಯತ್ನಿಸಿದ್ದಾರೆ. ಸಾವು ನೋವುಗಳ ಮಧ್ಯೆ ಜೀವ ಉಳಿಸುವುದಕ್ಕೋಸ್ಕರ ಆಹಾರ ಮತ್ತು ಔಷಧಕ್ಕಾಗಿ ಪರದಾಡುತ್ತಿರುವ ನೇಪಾಳಿಗರಿಗೆ ಕ್ರೈಸ್ತ ಮಿಷನರಿಗಳು ಒಂದು ಲಕ್ಷ ಬೈಬಲ್ ಗಳನ್ನು ಕಳಿಸಿಕೊಟ್ಟಿವೆ!
ರಕ್ಷಣಾ ಕಾರ್ಯಾಚರಣೆ, ಆಹಾರ ಪದಾರ್ಥಗಳನ್ನು ರವಾನೆ ಮಾಡುವುದು ಸೇರಿದಂತೆ ಹಲವು ರೀತಿಯಲ್ಲಿ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳು ಶಕ್ತಿ ಮೀರಿ ನೇಪಾಳಕ್ಕೆ ಸಹಾಯ ಮಾಡುತ್ತಿದ್ದರೆ, ಕ್ರೈಸ್ತ ಮಿಷನರಿಗಳು ಮಾತ್ರ ಅಗತ್ಯವಿರುವ ಸಾಮಗ್ರಿಗಳನ್ನು ಕಳಿಸುವುದು ಬಿಟ್ಟು ಬೈಬಲ್ ಗಳನ್ನು ಕಳಿಸಿಕೊಟ್ಟಿದ್ದಾರೆ. ಇದರಿಂದಾಗಿ ತೀವ್ರ ಆಕ್ರೋಶಕ್ಕೆ ಒಳಗಾಗಿರುವ ನೇಪಾಳದ ಪ್ರಧಾನಿ ಸುಶೀಲ್ ಕೊಯಿರಾಲ, ನಮಗೆ ಬೇಕಾಗಿರುವುದು ಔಷಧ ಹಾಗೂ ಆಹಾರವೇ ಹೊರತು ಬೈಬಲ್ ಗಳಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ನೀವು ನೇಪಾಳಕ್ಕಾಗಿ ಪ್ರಾರ್ಥಿಸುತ್ತಿದ್ದರೆ ಅದನ್ನು ಸ್ವಾಗತಿಸುತ್ತೇವೆ, ಆದರೆ ನೀವು ಕಳಿಸಿಕೊಟ್ಟಿರುವ ಬೈಬಲ್ ಗಳನ್ನು ತಿನ್ನಲು ನಮಗೆ ಸಾಧ್ಯವಿಲ್ಲ, ಮತ್ತೊಮ್ಮೆ ಬೈಬಲ್ ಕಳಿಸಬೇಡಿ ಎಂದು ಹೇಳುವ ಮೂಲಕ ನೇಪಾಳದ ಪ್ರಧಾನಿ, ಮಿಷನರಿಗಳಿಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ.
ನೇಪಾಳದಲ್ಲಿ ಭೂಕಂಪ ಸಂಭವಿಸುತ್ತಿದ್ದಂತೆಯೇ ಅಮೆರಿಕಾದ ಸ್ವಘೋಷಿತ ಕ್ರೈಸ್ತ ಭೋದಕನೋರ್ವ, ಭೂಕಂಪದಿಂದ ನೆಲಕಚ್ಚಿರುವ ದೇವಾಲಯಗಳನ್ನು ಮತ್ತೆ ನಿರ್ಮಿಸಬೇಡಿ, ಅದರ ಬದಲು ಕ್ರೈಸ್ತ ಮತಕ್ಕೆ ಮತಾಂತರವಾಗಿ ಚರ್ಚ್ ಗಳನ್ನು ನಿರ್ಮಿಸಿ ಎಂದು ಬಿಟ್ಟಿ ಸಲಹೆ ನೀಡಿದ್ದ. ಇದಾದ ಕೆಲವೇ ದಿನಗಳಲ್ಲಿ ಭೂಕಂಪ ಪೀಡಿತ ನೇಪಾಳಕ್ಕೆ ಆಹಾರ, ಔಷಧ ಸಾಮಗ್ರಿಗಳನ್ನು ಕಳಿಸುವ ಬದಲು ಕ್ರೈಸ್ತ ಮಿಷನರಿಗಳು ಬೈಬಲ್ ಗಳನ್ನು ಕಳಿಸಿ ಮತಾಂತರಗೊಳಿಸುವ ತಮ್ಮ ಹುನ್ನಾರವನ್ನು ಬಯಲು ಮಾಡಿದ್ದಾರೆ.