ಪ್ಯಾರಿಸ್ : ಪ್ಯಾರಿಸ್ ನ ಪತ್ರಿಕಾ ಕಛೇರಿ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಗೆ ವಿಶ್ಯಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ. ಉಗ್ರರ ದಾಳಿ ಹಿನ್ನಲೆಯಲ್ಲಿ ಫ್ರಾನ್ಸ್ ನ ಎಲ್ಲೆಡೆ ಕಟ್ಟೆಚ್ಚರವಹಿಸಲಾಗಿದೆ.
ಉಗ್ರರ ದುಷ್ಕೃತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಬ್ರಿಟನ್ ಪ್ರಧಾನಿ ಡೆವಿಡ್ ಕ್ಯಾಮರೂನ್ ಸೇರಿದಂತೆ ವಿಶ್ವದ ಹಲವು ಗಣ್ಯರು ಖಂಡನೆ ವ್ಯಕ್ತಪಡಿಸಿದ್ದಾರೆ.
ಉಗ್ರರ ದಾಳಿ ಪ್ರಕರಣದ ತನಿಖೆಯಲ್ಲಿ ಫ್ರಾನ್ಸ್ ಗೆ ಸಹಕಾರ ನೀಡುವುದಾಗಿ ಬರಾಕ್ ಒಬಾಮ ಭರವಸೆ ನೀಡಿದ್ದಾರೆ.
ದಾಳಿ ನಡೆಸಿದ್ದ ಓರ್ವ ಆರೋಪಿ ಪೊಲೀಸರಿಗೆ ಶರಣಾಗತಿಯಾಗಿದ್ದಾನೆ. ಶರಣಾದ ಆರೋಪಿ ಹಮೀದ್ ಮೌರಾದ್ ಎಂದು ತಿಳಿದುಬಂದಿದೆ. ದಾಳಿಕೋರರಾದ ಮತ್ತಿಬ್ಬರು ಆರೋಪಿಗಳ ಗುರುತು ಪತ್ತೆಯಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ರೇಖಾಚಿತ್ರ ಬಿಡುಗಡೆಮಾಡಲಾಗಿದೆ.
ಉಗ್ರರ ದಾಳಿ ಹಿನ್ನಲೆಯಲ್ಲಿ ರಾಜಧಾನಿ ಪ್ಯಾರಿಸ್ ನಗರದಾದ್ಯಂತ ಕಟ್ಟೆಚ್ಚರ ವಹಿಸುವಂತೆ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಆದೇಶ ನೀಡಿದ್ದಾರೆ. ಈ ನಿಟ್ಟಿನಲ್ಲಿ 800ಕ್ಕೂ ಹೆಚ್ಚು ಯೋಧರಿಂದ ಪ್ಯಾರಿಸ್ ನಲ್ಲಿ ಪಹರೆಕಾಯಲಾಗುತ್ತಿದೆ.
ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಜ.7ರಂದು ಚಾರ್ಲೆ ಹೆಬ್ಡೂ ಪತ್ರಿಕಾ ಕಚೇರಿ ಮೇಲೆ ಉಗ್ರರು ಅಟ್ಟಹಾಸ ಮೆರೆದಿದ್ದರು. ದಾಳಿಯಲ್ಲಿ ಪತ್ರಿಕೆಯ ಮುಖ್ಯಸಂಪಾದಕ, ಮೂವರು ಕಾರ್ಟೂನಿಸ್ಟ್ ಗಳು ಸೇರಿ 12 ಜನರು ಸಾವನ್ನಪ್ಪಿದ್ದರು.