ನವದೆಹಲಿ : ಸುನಂದಾ ಪುಷ್ಕರ್ ಅವರಿಗೆ ಸತ್ಯ ಗೊತ್ತಿತ್ತು. ಅದನ್ನು ಅವರು ಬಹಿರಂಗಪಡಿಸಲು ಇಚ್ಛಿಸಿದ್ದರು. ಇಲ್ಲಿ ಶಶಿ ತರೂರ್ ಸುಳ್ಳು ಹೇಳುತ್ತಿದ್ದು, ಸತ್ಯವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.
ಕಾಂಗ್ರೆಸ್ ನೇತಾರ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರದ್ದು ಸಹಜ ಸಾವು ಅಲ್ಲ, ಅದೊಂದು ಕೊಲೆ ಎಂದು ದೆಹಲಿ ಪೊಲೀಸರು ಹೇಳಿದ್ದು, ಇದಕ್ಕೆ ಬಿಜೆಪಿ ಹಿರಿಯ ನೇತಾರ ಸುಬ್ರಮಣಿಯನ್ ಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಸುನಂದಾ ಸಾವು ಪ್ರಕರಣದಲ್ಲಿ ದೆಹಲಿ ಪೊಲೀಸರು ಐಪಿಸಿ 302 ಪರಿಚ್ಛೇದದಡಿಯಲ್ಲಿ ಕೇಸು ದಾಖಲಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಾಮಿ, ಪೊಲೀಸರ ನಡೆ ಬಗ್ಗೆ ನನಗೆ ಸಂತಸವಿದೆ, ಇದೊಂದು ಕೊಲೆ, ಹಣ ತೆಗೆದುಕೊಂಡು ಮಾಡಿರುವ ಕೊಲೆ ಎಂದಿದ್ದಾರೆ.
2014 ಜನವರಿ 17 ರಂದು ಸುನಂದಾ ಐಶಾರಾವಿ ಹೋಟೆಲ್ ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದರು. ಸುನಂದಾ ಸಾವಿನ ಐದೇ ವಾರಗಳಲ್ಲಿ ಸ್ವಾಮಿ, ಇದೊಂದು ಕೊಲೆ, ಪಳಗಿದ ವ್ಯಕ್ತಿಯೊಬ್ಬರಿಂದಲೇ ಈ ರೀತಿಯ ಹತ್ಯೆಗೆಯ್ಯಲು ಸಾಧ್ಯ ಎಂದು ಹೇಳಿದ್ದರು.
ಸುನಂದಾ ಸಾವು ಪ್ರಕರಣದ ತನಿಖೆ ನಡೆಸುವ ವೇಳೆ ಸುಬ್ರಮಣಿಯನ್ ಸ್ವಾಮಿ ಶಶಿ ತರೂರ್ ಅವರ ಪತ್ನಿಗೆ ರಷ್ಯನ್ ವಿಷ (ಪೊಲೋನಿಯಂ) ಉಣಿಸಿ ಹತ್ಯೆಗೈಯ್ಯಲಾಗಿದೆ ಎಂದು ಹೇಳಿದ್ದರು.
ಪ್ರಸ್ತುತ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸ್ವಾಮಿ ಪತ್ರ ಬರೆದಿದ್ದರು. ಆದಾಗ್ಯೂ, ಐಪಿಎಲ್ ಅವ್ಯವಹಾರಕ್ಕೆ ಸಂಬಂಧಿಸಿಯೇ ಸುನಂದಾ ಕೊಲೆ ನಡೆದಿದೆ ಎಂದು ಸ್ವಾಮಿ ಆರೋಪಿಸಿದ್ದರು.