ನವದೆಹಲಿ : ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರದ್ದು ಆತ್ಮಹತ್ಯೆಯಲ್ಲ ಕೊಲೆ ಎಂದು ದೆಹಲಿ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಜ.6ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೆಹಲಿ ಆಯುಕ್ತ ಬಿ.ಎಸ್ ಬಸ್ಸಿ, ಸುನಂದಾ ಪುಷ್ಕರ್ ಅವರಿಗೆ ಬಲವಂತವಾಗಿ ವಿಶಪ್ರಾಶನ ಮಾಡಿಸುವ ಮೂಲಕ ಅಥವಾ ಇಂಜೆಕ್ಷನ್ ನೀಡುವ ಮೂಲಕ ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಮೆಡಿಕಲ್ ಬೋರ್ಡ್ ಸಹ ಸುನಂದಾ ಪುಷ್ಕರ್ ಅವರದ್ದು ಆತ್ಮಹತ್ಯೆಯಲ್ಲ ಎಂದು ವರದಿ ನೀಡಿದೆ.
ದೆಹಲಿ ಆಯುಕ್ತರು ನೀಡಿರುವ ಹೇಳಿಕೆಯಿಂದ ಸುನಂದಾ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು ಮಾಜಿ ಕೇಂದ್ರ ಸಚಿವ ಶಶಿತರೂರ್ ಅವರನ್ನು ವಿಚಾರಣೆಗೆ ಒಳಡಿಸುವ ಸಾಧ್ಯತೆ ಇದೆ. 2014ರ ಜನವರಿ 17ರಂದು ಸುನಂದಾ ಪುಷ್ಕರ್ ಅವರು ದೆಹಲಿ ಹೊಟೇಲ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು.
ಸುನಂದಾ ಪುಷ್ಕರ್ ಅವರ ಮೃತ ದೇಹದ ಮೇಲೆ ಗಾಯಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಸುನಂದಾ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಸುನಂದಾ ಪುಷ್ಕರ್ ಅವರಿಗೆ ರಷ್ಯನ್ ವಿಷ ನೀಡಿ ಹತ್ಯೆಗೈಯಲಾಗಿದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಮೊದಲಿಗೆ ಸುಬ್ರಮಣ್ಯನ್ ಸ್ವಾಮಿ ಟ್ವೀಟ್ ಮಾಡಿದ್ದರು.