ಬೆಂಗಳೂರು : 'ಉರ್ದು' ಭಾಷೆ ಕೇವಲ ಮುಸ್ಲಿಮರ ಭಾಷೆ ಅಲ್ಲ, ಅದು ಭಾರತೀಯ ಭಾಷೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಜ.5ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಡೈಲಿ ಸಾಲಾರ್ ಉರ್ದು ಪತ್ರಿಕೆಯ ಸುವರ್ಣ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ಉರ್ದು ಭಾರತೀಯ ಭಾಷೆ, ಅದು ಕೇವಲ ಮುಸ್ಲಿಮರಿಗೆ ಮಾತ್ರ ಸೀಮಿತವಲ್ಲ, ಮುಸ್ಲಿಮೇತರರೂ ಉರ್ದು ಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಡೈಲಿ ಸಾಲಾರ್ ಉರ್ದು ಪತ್ರಿಕೆಯ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಸಾಲಾರ್ ಪತ್ರಿಕೆ ರಾಷ್ಟ್ರೀಯವಾದ ಪ್ರತಿಪಾದನೆ ಮಾಡುತ್ತದೆ ಎಂದು ಶ್ಲಾಘಿಸಿದ್ದಾರೆ. ಇದೇ ವೇಳೆ ಮಾತನಾಡಿದ ವಾಜುಭಾಯ್ ವಾಲ ಪ್ರತಿಯೊಬ್ಬರಿಗೂ ಮಾನವೀಯತೆ ಇರಬೇಕು, ಮಾನವೀಯತೆ ಇಲ್ಲದವನು ಮನುಷ್ಯನೇ ಅಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್, ಡೈಲಿ ಸಾಲಾರ್ ಟ್ರಸ್ಟ್ ನ ಅಧ್ಯಕ್ಷ ಮಹಮದ್ ಅತೀಕ್, ವಾರ್ತಾ ಸಚಿವೆ ರೋಷನ್ ಬೇಗ್ ಉಪಸ್ಥಿತರಿದ್ದರು.