ಬೆಂಗಳೂರು : ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕ ಜಮೀರ್ ಅಹ್ಮದ್ ನಡುವಿನ ಅಸಮಾಧಾನ ಮತ್ತೊಮ್ಮೆ ಬಹಿರಂಗವಾಗಿ ಸಾಬೀತಾಗಿದೆ.
ಬೆಂಗಳೂರಿನಲ್ಲಿ ಮಾತನಾಡಿದ ಜಮೀರ್ ಅಹ್ಮದ್, ಬಕ್ರೀದ್ ಆಚರಣೆಗೆ ಈದ್ಗಾ ಮೈದಾನದ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಕುಮಾರಸ್ವಾಮಿಯವರಿಗೆ ಆಹ್ವಾನ ನೀಡಿದ್ದೆ. ಉರ್ದು ಭಾಷೆಯಲ್ಲಿ ಪತ್ರ ಬರೆದು ಆಹ್ವಾನಿಸಿದ್ದೆ, ಪ್ರತಿ ವರ್ಷವೂ ಅವರು ಬಕ್ರೀದ್ ಆಚರಣೆಗೆ ಆಗಮಿಸುತ್ತಿದ್ದರು ಈ ವರ್ಷ ಬರಲಿಲ್ಲ ಎಂದರು.
ನಾನು ಉರ್ದು ಭಾಷೆಯಯಲ್ಲಿ ಪತ್ರ ಬರೆದಿದ್ದರಿಂದ ಅವರಿಗೆ ಓದಲು ಬರಲಿಲ್ಲವೆನಿಸುತ್ತದೆ. ನನಗೆ ಕನ್ನಡದಲ್ಲಿ ಬರೆಯಲು ಬರುವುದಿಲ್ಲ, ಅವರಿಗೆ ಉರ್ದು ಓದಲು ಬರುವುದಿಲ್ಲ ಹೀಗಾಗಿ ಕುಮಾರಸ್ವಾಮಿ ಬಕ್ರೀದ್ ಆಚರಣೆಗೆ ಬರಲಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಈ ನಡುವೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಜೆಡಿಎಸ್ ಕೋರ್ ಕಮಿಟಿ ಸಭೆಗೆ ಬರುವಂತೆ ಎರಡುಬಾರಿ ಪತ್ರ ಬರೀದಿದ್ದೇನೆ. ಆದರೂ ಜಮೀರ್ ಅಹ್ಮದ್ ಸಭೆಗೆ ಆಗಮಿಸಿಲ್ಲ, ಬಹುಶ: ಅವರಿಗೆ ಉರ್ದು ಅಥವಾ ಇಂಗ್ಲೀಷ್ ಭಾಷೆಯಲ್ಲಿ ಪತ್ರ ಬರೆದಿದ್ದರೆ ಅರ್ಥವಾಗುತ್ತಿತ್ತೇನೋ ನನಗೆ ಗೊತ್ತಾಗದೇ ಕನ್ನಡದಲ್ಲಿ ಪತ್ರ ಬರೆದಿದ್ದೆ ಎಂದು ತಿರುಗೇಟು ನೀಡಿದ್ದಾರೆ.