ಬೆಂಗಳೂರು : ಭ್ರಷ್ಟಾಚಾರದ ವಿಷಯವಾಗಿ ಬಿಜೆಪಿಗೆ ದೊಡ್ಡ ಇತಿಹಾಸವೇ ಇದೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ ಕ್ರಿಮಿನಲ್ ಮೊಕದ್ದಮೆ ಎದುರಿಸಿ ಕೇಂದ್ರ ಸರ್ಕಾರದ ಕೃಪಾ ಕಟಾಕ್ಷದಿಂದ ಪಾರಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಚಿವರ ನಡುವೆ ಸಮನ್ವಯತೆ ಇಲ್ಲ. ಎಂಬ ಬಿಜೆಪಿಯ ಅಮಿತ್ ಶಾ ಆರೋಪಕ್ಕೆ ಪ್ರತಿಕ್ರಿಯಿಸಿ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ, ಸಚಿವರು, ಶಾಸಕರು, ಭ್ರಷ್ಟಾಚಾರ ಆರೋಪಕ್ಕಾಗಿ ಜೈಲಿಗೆ ಹೋಗಿ ಬಂದಿದ್ದರು. ಈಗಲೂ ಕೆಲವರು ಜೈಲಿನಲ್ಲೇ ಇದ್ದಾರೆ. ಅಂಥವರಿಂದ ಕಾಂಗ್ರೆಸ್ ಪಾಠ ಕಲಿಯಬೇಕಿಲ್ಲ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಬಿಜೆಪಿಗಿಲ್ಲ ಎಂದು ಕಿಡಿಕಾರಿದರು.
ಗುಜರಾತ್ನ ಗೃಹ ಸಚಿವರಾಗಿದ್ದಾಗ ಅಮಿತ್ ಶಾ ನಕಲಿ ಎನ್ಕೌಂಟರ್ನಲ್ಲಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಮೋದಿ ಕೃಪಾಕಟಾಕ್ಷದಿಂದ ಆರೋಪದಿಂದ ನುಣುಚಿಕೊಂಡಿದ್ದಾರೆ. ಅಂಥ ಅಮಿತ್ ಶಾ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಪಾಠ ಹೇಳಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.
ಇದೇ ವೇಳೆ ಕೆಪಿಎಸ್ಸಿಗೆ ಸುದರ್ಶನ್ ಸೇರಿ ಮೂವರು ರಾಜಕೀಯ ನಾಯಕರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಬಗ್ಗೆ ರಾಜ್ಯಪಾಲರು ಸ್ಪಷ್ಟನೆ ಕೇಳಿದ್ದರು. ಸರ್ಕಾರ ಅಗತ್ಯ ಸ್ಪಷ್ಟನೆ ನೀಡಿದೆ. ರಾಜ್ಯಪಾಲರು ಸರ್ಕಾರ ಕಳುಹಿಸಿರುವ ಪಟ್ಟಿ ಅಂಗೀಕರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.