ಅಹಮದಾಬಾದ್ : ಪಾಕಿಸ್ತಾನದ ಉಗ್ರರಿಂದ ನಡೆಯಬಹುದಾಗಿದ್ದ ವಿಧ್ವಂಸಕ ಕೃತ್ಯವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಮುಂಬೈ ದಾಳಿ ಮಾದರಿಯಲ್ಲೇ ವಿಧ್ವಂಸಕ ಕೃತ್ಯ ನಡೆಸಲು ಹೊಸ ವರ್ಷಾಚರಣೆಯಂದು ಜಲ ಮಾರ್ಗದ ಮೂಲಕ ಭಾರತ ಪ್ರವೇಶಿಸಲು ಮುಂದಾಗಿದ್ದ ಪಾಕಿಸ್ತಾನದ ಉಗ್ರರ ಸಂಚನ್ನು ಸೇನೆ ಭೇದಿಸಿದೆ.
ಡಿಸೆಂಬರ್ 31ರಂದು ಪಾಕಿಸ್ತಾನದ ಹಡಗು ಗುಜರಾತ್ ನ ಪೋರಬಂದರ್ ಕರಾವಳಿಯಲ್ಲಿ ಪತ್ತೆಯಾಗಿತ್ತು. ಹಡಗು ಮತ್ತು ಅದರಲ್ಲಿದ್ದ 4 ಶಂಕಿತ ಉಗ್ರರನ್ನು ಗುರುತಿಸಿದ ಗುಪ್ತಚರ ಸಂಸ್ಥೆ ಕರಾವಳಿ ಕಾವಲುಪಡೆಗೆ ಮಾಹಿತಿ ನೀಡಿದೆ.
ಮಾಹಿತಿಯನ್ನಾಧರಿಸಿ ಕರಾವಳಿ ಕಾವಲು ಹಡಗನ್ನು ಹಿಂಬಾಲಿಸಿ ನಿಲ್ಲಿಸುವಂತೆ ಸೂಚನೆ ನೀಡಿದೆ. ಆದರೆ ಸೂಚನೆಯನ್ನು ಉಲ್ಲಂಘಿಸಿದ ಹಡಗಿನಲ್ಲಿದ್ದ ವ್ಯಕ್ತಿಗಳು ಪಲಾಯನ ಮಾಡಲು ಯತ್ನಿಸಿದರು. ಸುಮಾರು ಒಂದು ಗಂಟೆ ಕಾಲ ಭಾರತದ ಕಾವಲು ಪಡೆ ಅವರನ್ನು ಬೆನ್ನಟ್ಟಿದ ನಂತರ ತಾವಾಗಿಯೇ ಹಡಗಿಗೆ ಬೆಂಕಿ ಹಚ್ಚಿ ಸ್ಫೋಟಿಸಿಕೊಂಡಿದ್ದಾರೆ. ಸ್ಪೋಟದ ಪ್ರಮಾಣ ದಂಗುಬಡಿಸುವಂತಿತ್ತು ಎಂದು ವರದಿಯಾಗಿದೆ.
ಇದುವರೆಗೂ ಹಡಗಿನ ಅವಶೇಷ ಪತ್ತೆಯಾಗಿಲ್ಲ. ಈ ಕುರಿತು ತನಿಖೆ ಚುರುಕಿನಿಂದ ನಡೆಯುತ್ತಿದೆ. ಹಡಗು ಪಾಕಿಸ್ತಾನದ ಕರಾಚಿ ಕರಾವಳಿಯಿಂದ ಬಂದಿದ್ದಾಗಿದ್ದು, ಹಡಗಿನಲ್ಲಿ ಅಪಾರ ಪ್ರಮಾನದ ಸ್ಪೋಟಗಳಿದ್ದವು ಎಂದು ರಕ್ಷಣಾ ಇಲಾಖೆ ತಿಳಿಸಿದೆ.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪಾಕಿಸ್ತಾನದ ಉಗ್ರರು ಮುಂಬೈ ದಾಳಿ ಮಾದರಿಯಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಲ್ಲಾ ರಾಜ್ಯಗಳಿಗೂ ಎಚ್ಚರಿಕೆ ನೀಡಿತ್ತು.