ನವದೆಹಲಿ : ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡುತ್ತಿದೆ ಎಂಬ ಆರೋಪ ಎದುರಿಸುತ್ತಿರುವ ಬಾಲಿವುಡ್ ನ ಸಿನಿಮಾ ಪಿ.ಕೆ ವಿರುದ್ಧ ಬಿಜೆಪಿ ನಾಯಕ ಡಾ.ಸುಬ್ರಹ್ಮಣಿಯನ್ ಸ್ವಾಮಿ ಗಂಭೀರ ಆರೋಪ ಮಾಡಿದ್ದು ಪಿ.ಕೆ ಸಿನಿಮಾ ಫಂಡಿಂಗ್ ವಿರುದ್ಧ ದೂರು ನೀಡುವುದಾಗಿ ತಿಳಿಸಿದ್ದಾರೆ.
ಹಿಂದೂಗಳ ಭಾವನೆಗೆ ಧಕ್ಕೆಯುಂಟುಮಾಡುವ ಪಿ.ಕೆ ಸಿನಿಮಾ ನಿರ್ಮಾಣ ಮಾಡಲು ದುಬೈ ಹಾಗೂ ಪಾಕಿಸ್ತಾನದ ಐ.ಎಸ್.ಐಯಿಂದ ಹಣ ಪಡೆಯಲಾಗಿದೆ ಎಂದು ಸುಬ್ರಹ್ಮಣಿಯನ್ ಸ್ವಾಮಿ ಆರೋಪಿಸಿದ್ದಾರೆ. ಈ ಬಗ್ಗೆ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿ.ಆರ್.ಐ)ತನಿಖೆ ನಡೆಸಬೇಕೆಂದು ಸ್ವಾಮಿ ಆಗ್ರಹಿಸಿದ್ದಾರೆ. ಅಲ್ಲದೇ ಈ ಬಗ್ಗೆ ಕೋರ್ಟ್ ಗೆ ದೂರು ನೀಡುವುದಾಗಿ ಹೇಳಿದ್ದಾರೆ.
ಅಮೀರ್ ಖಾನ್ ನಟನೆಯ ಪಿ.ಕೆ ಸಿನಿಮಾ ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾಡುತ್ತಿದ್ದು ಸಿನಿಮಾ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಿಂದೂಪರ ಸಂಘಟನೆಗಳು ಒತ್ತಾಯಿಸಿವೆ. ಹಿಂದೂ ಜನಜಾಗೃತಿ ಸಮಿತಿ, ವಿಶ್ವಹಿಂದೂ ಪರಿಷತ್, ಸೇರಿದಂತೆ ಹಲವು ಸಂಘಟನೆಗಳು ಪಿ.ಕೆ ಸಿನಿಮಾ ನಿಷೇಧಿಸಬೇಕೆಂದು ಒತ್ತಾಯಿಸಿವೆ.