ಇಸ್ಲಾಮಾಬಾದ್ : 26/11ರ ಮುಂಬೈ ದಾಳಿಯ ರೂವಾರಿ ಝಕೀಉರ್ ರೆಹಮಾನ್ ಲಖ್ವಿಯನ್ನು ಇಸ್ಲಾಮಾಬಾದ್ ಹೈಕೋರ್ಟ್ ಬಂಧಮುಕ್ತಗೊಳಿಸಿದೆ.
ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕೋರ್ಟಿನ ನ್ಯಾಯಾಧೀಶ ಕೌಸರ್ ಅಬ್ಬಾಸ್ ಝೈದಿ ಡಿಸೆಂಬರ್ 18ರಂದು ಈತನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದರು.
ಆದರೆ ಭಾರತ ಮತ್ತು ಅಂತಾರಾಷ್ಟ್ರೀಯ ಸಮುದಾಯದ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ ಪಾಕ್ ಸರ್ಕಾರ ಈತನನ್ನು ಸಾರ್ವಜನಿಕ ಭದ್ರತಾ ಆದೇಶ ಕಾಯ್ದೆಯಡಿ ಪುನಃ ಬಂಧಿಸಿ ಮೂರು ತಿಂಗಳ ಅವಧಿಗೆ ಜೈಲಿನಲ್ಲೇ ಉಳಿಸಿತ್ತು. ಈ ಆದೇಶವನ್ನು ಉಗ್ರ ಲಖ್ವಿ ಇಸ್ಲಾಮಾಬಾದ್ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದ.
ಸರ್ಕಾರ ತನ್ನ ವಿರುದ್ಧ ಹೊರಿಸಿದ ಆರೋಪಗಳು ನಿರಾಧಾರ ಎಂದು ಲಖ್ವಿ ಕೋರ್ಟಿನಲ್ಲಿ ವಾದಿಸಿದ್ದ. ಈಗ ಲಖ್ವಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದು, ಶೀಘ್ರದಲ್ಲಿಯೇ ಬಿಡುಗಡೆಯಾಗಲಿದ್ದಾನೆ.
ಮುಂಬೈ ಮೇಲಿನ ದಾಳಿಯ ಸಂಚು ರೂಪಿಸಿದ ಆರೋಪದಲ್ಲಿ ಲಖ್ವಿ ಹಾಗೂ ಆತನ ಆರು ಸಹಚರರಾದ ಅಬ್ದುಲ್ ವಾಜಿದ್, ಮಝರ್ ಇಕ್ಬಾಲ್, ಹಮದ್ ಅಮೀನ್ ಸಾದಿಕ್, ಶಾಹಿದ್ ಜಮೀಲ್ ರಿಯಾಜ್, ಜಮೀಲ್ ಅಹ್ಮದ್ ಮತ್ತು ಯೂನಿಸ್ ಅಂಜುಮ್ ಎಂಬವರನ್ನು ಪಾಕಿಸ್ತಾನ ಬಂಧಿಸಿ ಜೈಲಿಗಟ್ಟಿತ್ತು.