ನವದೆಹಲಿ : ಪಾಕಿಸ್ತಾನ ಸೇನೆಯು ಕಾಶ್ಮೀರದಲ್ಲಿ ‘ಸ್ವಾತಂತ್ರ್ಯ’ ಮತ್ತು ಆಫ್ಘಾನಿಸ್ತಾನದಲ್ಲಿ ‘ಪರೋಕ್ಷ ಯುದ್ಧ’ ಹೆಸರಿನಲ್ಲಿ ನಡೆಸಿದ ‘ನೆತ್ತರಿನಾಟಕ್ಕೆ’ ‘ಜಿಹಾದಿ’ಗಳನ್ನು ಬಳಸಿಕೊಂಡು ಈಗ ಅವರ ವಿರುದ್ಧವೇ ದಾಳಿ ನಡೆಸುತ್ತಿದೆ ಎಂದು ತೆಹ್ರಿಕ್ ಎ ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಉಗ್ರಗಾಮಿ ಸಂಘಟನೆ ಆರೋಪಿಸಿದೆ. ಇದಕ್ಕೆ ಸಂಬಂಧಿಸಿ ವಿಡಿಯೊ ಕೂಡ ಬಿಡುಗಡೆ ಮಾಡಿದೆ.
ಟಿಟಿಪಿಯ ಹಿರಿಯ ಕಮಾಂಡರ್ ಪಾಕಿಸ್ತಾನ ವಾಯುಪಡೆಯ ಮಾಜಿ ಅಧಿಕಾರಿ ಅದ್ನಾನ್ ರಶೀದ್ ಎಂಬಾತ ಮಾತನಾಡಿರುವ ವಿಡಿಯೊ ಬಿಡುಗಡೆ ಮಾಡಲಾಗಿದೆ. 1971ರ ಬಾಂಗ್ಲಾ ದೇಶ ಸ್ವಾತಂತ್ರ್ಯ ಯುದ್ಧದಲ್ಲಿ ಲಕ್ಷಾಂತರ ಜನರನ್ನು ಹತ್ಯೆ ಮಾಡಿರುವುದು, ‘ತಮ್ಮದೇ ಸೋದರಿಯರ ಮೇಲೆ ಅತ್ಯಾಚಾರ ನಡೆಸಿರುವುದು’ ಸೇರಿ ಪಾಕಿಸ್ತಾನ ಸೇನೆಯ ಹಲವು ದೌರ್ಜನ್ಯಗಳನ್ನು ಈತ ಪಟ್ಟಿ ಮಾಡಿದ್ದಾನೆ. ನಂತರ ಪಾಕಿಸ್ತಾನ ಸೇನೆಯ ಯೋಧರು ಟಿಟಿಪಿ ಸೇರುವಂತೆ ಕರೆ ನೀಡಿದ್ದಾನೆ.
ಈತ ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷರಫ್ ಮೇಲಿನ ದಾಳಿಯ ಆರೋಪಿ. 15 ನಿಮಿಷಕ್ಕೂ ಹೆಚ್ಚಿನ ಅವಧಿಯ ವಿಡಿಯೊವನ್ನು ಕ್ರಿಸ್ಮಸ್ಗೂ ಮೊದಲು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಆತ ಪಾಕಿಸ್ತಾನ ಸೇನೆಯ ಅಧಿಕಾರಿಗಳನ್ನು ‘ಬ್ರಾಹ್ಮಣರು’ ಎಂದು ಕರೆದು ಅವರು ಯೋಧರನ್ನು ‘ಶೂದ್ರರ’ ಹಾಗೆ ನಡೆಸಿಕೊಳ್ಳುತ್ತಾರೆ ಎಂದಿದ್ದಾನೆ.
ಪಾಕಿಸ್ತಾನ ಸೇನೆಯ ಹಲವು ಕೃತಘ್ನ ನಡೆಗಳನ್ನು ರಶೀದ್ ವಿಡಿಯೊದಲ್ಲಿ ವಿವರಿಸಿದ್ದಾನೆ. ಆಫ್ಘಾನಿಸ್ತಾನದಲ್ಲಿ ಪರೋಕ್ಷ ಯುದ್ಧದಲ್ಲಿ ತೊಡಗುವ ಮೂಲಕ ಪಾಕಿಸ್ತಾನ ಸೇನೆ ಲಕ್ಷಾಂತರ ಡಾಲರ್ ಹಣ ಗಳಿಸಿದೆ. ಜಿಹಾದ್ ಹೆಸರಿನಲ್ಲಿ ಸೇನೆ ಜನರನ್ನು ವಂಚಿಸಿದೆ. ಕಾಶ್ಮೀರದಲ್ಲಿ ಸ್ವಾತಂತ್ರ್ಯದ ಹೆಸರಿನಲ್ಲಿ ಯುವಕರನ್ನು ಅಪಾಯಕ್ಕೆ ದೂಡಲಾಗಿದೆ ಎಂದು ಆತ ಆರೋಪಿಸಿದ್ದಾನೆ.
ಈಗ ಪಾಕಿಸ್ತಾನ ಸೇನೆಯು ಜಿಹಾದನ್ನು ಭಯೋತ್ಪಾದನೆ ಮತ್ತು ಜಿಹಾದಿಗಳನ್ನು ಉಗ್ರರು ಎಂದು ಹೇಳುತ್ತಿದೆ. ಸೇನೆಯು ಯೋಧರನ್ನು ‘ಅತ್ಯಂತ ಮೂರ್ಖ ಪ್ರಾಣಿ’ ಎಂಬಂತೆ ನೋಡುತ್ತಿದೆ. ಹಾಗಾಗಿ ಜನರಲ್ಗಳು ಮತ್ತು ಏರ್ ಮಾರ್ಷಲ್ಗಳ ಆದೇಶಗಳನ್ನು ಪಾಲಿಸಬೇಡಿ ಎಂದು ರಶೀದ್ ಸೈನಿಕರಿಗೆ ಸಲಹೆ ನೀಡಿದ್ದಾನೆ.