ಇಸ್ಲಾಮಾಬಾದ್ : ಭೂಗತ ಪಾತಕಿ, ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಕರಾಚಿಯಲ್ಲೇ ಇದ್ದಾನೆ ಎಂದು ಗುಪ್ತಚರ ಸಂಸ್ಥೆಗಳು ಸ್ಪಷ್ಟಪಡಿಸಿದೆ.
ಖಾಸಗಿ ಭದ್ರತಾ ಸಂಸ್ಥೆಯ ಮೂಲಗಳ ಪ್ರಕಾರ ಈಗಲೂ ದಾವೂದ್ ಇಬ್ರಾಹಿಂ ಕರಾಚಿಯಲ್ಲೇ ಇದ್ದಾನೆ. ಈ ಬಗ್ಗೆ ಗುಪ್ತಚರ ಸಂಸ್ಥೆಗಳಿಗೆ ಪ್ರಬಲ ಸಾಕ್ಷ್ಯಾಧಾರ ದೊರೆತಿದ್ದು, ಪಾಕಿಸ್ತಾನದ ಖ್ಯಾತ ಉಧ್ಯಮಿಯ ಪುತ್ರನೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ದಾಖಲೆಗಳು ಗುಪ್ತಚರ ಸಂಸ್ಥೆಗಳಿಗೆ ಲಭಿಸಿದೆ. ಈ ದೂರವಾಣಿಯ ಜಾಡನ್ನು ಹಿಡಿದು ತನಿಖೆ ನಡೆಸಿದಾಗ ಇದು ಕರಾಚಿಯ ಒಂದು ಪ್ರದೇಶ ಎಂದು ತಿಳಿದುಬಂದಿದೆ.
ಪಾಕಿಸ್ತಾನದ ಖ್ಯಾತ ಉದ್ಯಮಿಯ ಪುತ್ರ ಮತ್ತು ದುಬೈನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಆಗಿರುವ ಯಾಸಿರ್ ಎಂಬಾತನೊಂದಿಗೆ ದಾವೂದ್ ದೂರವಾಣಿಯಲ್ಲಿ ಮಾತನಾಡಿದ್ದು, ಸಂಭಾಷಣೆ ವೇಳೆ ದಾವೂದ್ 'ನಾನು ದುಬೈನಲ್ಲಿ 1, 100 ಕೋಟಿ ರುಪಾಯಿ ಆಸ್ತಿ ಹೊಂದಿದ್ದೇನೆ. ಇದಲ್ಲದೆ ಕರಾಚಿಯ ವಿವಿಧೆಡೆ ತಾನು ಕೋಟ್ಯಾಂತರ ರುಪಾಯಿ ಮೌಲ್ಯದ ಆಸ್ತಿ ಹೊಂದಿದ್ದೇನೆ. ಇಷ್ಟು ಪ್ರಭಾವಿಯಾದ ತನಗೆ ತಡೆ ಒಡ್ಡುವವರಾರು..? ಇಲ್ಲಿ ನಾನೇ ಪ್ರಧಾನಿ, ನಾನೇ ನ್ಯಾಯಾಧೀಶ, ನಾನೇ ನ್ಯಾಯಾಲಯ' ಎಂದು ಬಡಾಯಿ ಕೊಚ್ಚಿಕೊಂಡಿದ್ದಾನಂತೆ. ಈ ದೂರವಾಣಿಯ ಜಾಡನ್ನು ಪರಿಶೀಲಿಸಿದಾಗ ಇದು ಕರಾಚಿಯ 'ಕ್ಲಿಪ್ಟನ್' ಪ್ರದೇಶದಿಂದ ಮಾಡಿದ ಕರೆಯಾಗಿದೆ ಎಂದು ತಿಳಿದುಬಂದಿದೆ.
ಮುಂಬೈ ಸರಣಿ ಸ್ಫೋಟದ ಪ್ರಮುಖ ರೂವಾರಿಯಾಗಿರುವ ದಾವೂದ್ 1993ರಲ್ಲಿ ಭಾರತದಿಂದ ಕಾಲ್ಕಿತ್ತಿದ್ದ. ಈತನಿಗೆ ಪಾಕಿಸ್ತಾನ ಸರ್ಕಾರ ರಕ್ಷಣೆ ನೀಡಿ ಪೋಷಿಸುತ್ತಿದೆ. ತನ್ನ ಡಿ ಕಂಪನಿ ಮೂಲಕ ವಿಧ್ವಂಸಕ ಕೃತ್ಯಗಳನ್ನು ಮುಂದುವರೆಸುತ್ತಿರುವ ಈತನನ್ನು ಮಟ್ಟಹಾಕಲು ಭಾರತ ಮತ್ತು ಅಮೆರಿಕ ದೇಶಗಳು ಜಂಟಿ ಕಾರ್ಯಾಚರಣೆಗೆ ಮುಂದಾಗಿವೆ. ಇದಕ್ಕಾಗಿ ಈಗಾಗಲೇ ಕೆಲ ರಕ್ಷಣಾ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, ಅವರು ಕಾರ್ಯಪ್ರವೃತ್ತರಾಗಿದ್ದಾರೆ.
ಆದರೆ ಗುಪ್ತಚರ ಇಲಾಖೆಯ ಪ್ರಸ್ತುತ ದಾಖಲೆಗಳ ಪ್ರಕಾರ ಈಗಲೂ ದಾವೂದ್ ಕರಾಚಿಯಲ್ಲೇ ಇದ್ದಾನೆ ಎಂದು ತಿಳಿದು ಬಂದಿದೆ. ಅಲ್ಲದೆ ಭಾರತೀಯ ಭದ್ರತಾ ಪಡೆಗಳ ದಿಕ್ಕು ತಪ್ಪಿಸಲು ಐಎಸ್ಐ ಈ ನಾಟಕವಾಡಿರಬಹುದು ಎಂದೂ ಗುಪ್ತಚರ ಇಲಾಖೆ ಮೂಲಗಳು ಶಂಕೆ ವ್ಯಕ್ತಪಡಿಸಿವೆ.