ನವದೆಹಲಿ : ಮಾದಕ ವ್ಯಸನ ಮುಕ್ತ ಸಮಾಜಕ್ಕೆ ಬದ್ಧರಾಗೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಭಾನುವಾರ ಪ್ರಸಾರವಾದ 'ಮನ್ ಕೀ ಬಾತ್' ನಲ್ಲಿ ದೇಶದಲ್ಲಿ ಮಾದಕ ವಸ್ತುಗಳ ಸೇವನೆ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಜನರು ತಮ್ಮ ಅಭಿಪ್ರಾಯಗಳನ್ನು ತಮ್ಮೊಂದಿಗೆ ಹಂಚಿಕೊಂಡಿರುವುದಕ್ಕೆ ಪ್ರಧಾನಿ ಮೋದಿ ಎಲ್ಲರಿಗೂ ಧನ್ಯವಾದ ತಿಳಿಸಿದರು.
ನಾನೊಬ್ಬ ಪ್ರಧಾನ ಸೇವಕ, ಪ್ರಧಾನ ಮಂತ್ರಿಯಲ್ಲ ಎಂದ ಅವರು, ದೇಶದಲ್ಲಿ ಮಾದಕ ವಸ್ತು ಬಳಕೆ ಹೆಚ್ಚಾಗುತ್ತಿದೆ. ಮಾದಕ ವಸ್ತು ಸೇವನೆ ಮಹಾ ಮಾರಿ, ಅದು ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಅದರ ವ್ಯವಸಕ್ಕೆ ಒಳಗಾಗುವುದು ದೊಡ್ಡ ತಪ್ಪು. ಆದರೆ ಮಾದಕ ವಸ್ತುಗಳ ಸೇವನೆಗೆ ಬಲಿಯಾಗುವವರು ಮಾನಸಿಕ, ಸಾಮಾಜಿಕ ಹಾಗೂ ಆರೋಗ್ಯ ಸಮಸ್ಯೆಗಳಲ್ಲಿ ಸಿಲುಕಿಕೊಂಡಿರುತ್ತಾರೆ. ಇಲ್ಲಿ ನಾವು ವ್ಯಕ್ತಿಯೊಬ್ಬನನ್ನು ದೂರುವುದು ಸರಿಯಲ್ಲ ಎಂದರು.
ಮಾದಕ ಸೇವನೆಗೆ ಮೂರು ಪರಿಣಾಮಗಳೆಂದರೆ, ಅಂಧಕಾರ, ಸರ್ವನಾಶ ಮತ್ತು ನಾಶ. ಇಂಥಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಟೋಲ್ ಫ್ರೀ ಸಂಖ್ಯೆ ಆರಂಭಿಸುವಂತೆ ನಾನು ಹೇಳಿದ್ದೀನಿ. ಯಾವುದೇ ಡ್ರಗ್ ಖರೀದಿ ಮಾಡುವ ಮುನ್ನ ಯೋಚಿಸಿ. ಅದಕ್ಕೆ ಖರ್ಚು ಮಾಡಿದ ಹಣ ಎಲ್ಲಿಗೆ ಹೋಗುತ್ತೆ ಎಂಬುದರ ಬಗ್ಗೆ ಅರಿತುಕೊಳ್ಳಿ. ಇಂಥಾ ಹಣ ಭಯೋತ್ಪಾದನೆಗೆ ಅಥವಾ ಮಾಫಿಯಾಗೆ ಹೋಗಿ ಸೇರುವ ಸಾಧ್ಯತೆ ಇದೆ. ಅದರಲ್ಲಿರುವ ಜನರ ಬುಲೆಟ್ಗಳೇ ನಮ್ಮ ಸೈನಿಕರ ಪ್ರಾಣ ಅಪಹರಿಸುವುದು ಎಂದು ತಿಳಿಸಿದರು.
ಡ್ರಗ್ಸ್ ಸೇವನೆ ಮತ್ತು ಅದರ ಪರಿಣಾಮಗಳ ಬಗ್ಗೆ ನಿಮ್ಮ ಸ್ನೇಹಿತರಲ್ಲಿಯೇ ಜಾಗೃತಿ ಮೂಡಿಸಿ ಎಂದು ಕರೆ ನೀಡಿದರು.
ಯಾವುದೇ ಒಂದು ಮಗು ತಕ್ಷಣಕ್ಕೆ ಡ್ರಗ್ಸ್ ಸೇವನೆ ಮಾಡಲು ಹೋಗುವುದಿಲ್ಲ. ಅದೊಂದು ಪ್ರಕ್ರಿಯೆ. ಇದನ್ನು ಹೆತ್ತವರು ಅರ್ಥ ಮಾಡಿಕೊಂಡು, ಆ ಮಗುವಿಗೆ ಸಹಾಯ ಮಾಡಬೇಕು.
ಈ ಬಗ್ಗೆ ಜನರು ಜಾಗೃತಿ ಮೂಡಿಸಬೇಕಾದುದು ಅತ್ಯಗತ್ಯ. ಮಾದಕ ವ್ಯಸನ ದೇಶದ ಸಮಸ್ಯೆ, ನಾನಿಲ್ಲಿ ಭಾಷಣ ಬಿಗಿಯುತ್ತಿಲ್ಲ, ಆದರೆ ಆ ನೋವನ್ನು ಹಂಚಲು ಯತ್ನ ಮಾಡುತ್ತಿದ್ದೇನೆ. ಇಂಥಾ ಪಿಡುಗನ್ನು ನಿವಾರಣೆ ಮಾಡಲು ಜವಾಬ್ದಾರಿಯುತ ಸಮಾಜವನ್ನು ನಿರ್ಮಿಸಲು ನಾನು ಪ್ರಯತ್ನಿಸುತ್ತಿದ್ದೇನೆ ಎಂದು ತಿಳಿಸಿದರು.
ನಾವು ಡ್ರಗ್ ಫ್ರೀ ಇಂಡಿಯಾ ಅಭಿಯಾನವನ್ನೇ ಆರಂಭಿಸೋಣ, ಇದು ನಮ್ಮನ್ನು ಲೋಕ್ ಸಕ್ಷ ದತ್ತ(ಸಶಕ್ತ ಸಮಾಜ) ಕೊಂಡೊಯ್ಯುತ್ತದೆ ಎಂದು ಮೋದಿ ಹೇಳಿದ್ದಾರೆ.
ನಾನು ಅಂಧರ ಕ್ರಿಕೆಟ್ ವಿಶ್ವಕಪ್ ಗೆದ್ದ ಆಟಗಾರರನ್ನು ಭೇಟಿ ಮಾಡಿದ್ದೆ. ಅವರನ್ನು ಭೇಟಿ ಮಾಡಿದಾಗ ನನಗೆ ಪಾಸಿಟಿವ್ ಎನರ್ಜಿ ಸಿಕ್ಕಿತು. ಅದರಲ್ಲೂ ಮುಂಬೈ ವಿರುದ್ಧ ಜಮ್ಮು ಕಾಶ್ಮೀರ ಟೀಂ ಗೆಲವು ಸಾಧಿಸಿದ್ದು ಪ್ರಶಂಸನೀಯ. ಜೂನ್ 21ನೇ ತಾರೀಖನ್ನು ಅಂತಾರಾಷ್ಟ್ರೀಯ ಯೋಗ ದಿನ ಎಂದು ವಿಶ್ವಸಂಸ್ಥೆ ಘೋಷಿಸಿದೆ. ಇದು ನಮಗೆ ಸಿಕ್ಕ ಗೌರವ ಎಂದರು.
ಇದೇ ವೇಳೆ ನಾನು ಹಲವು ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು ಖುಷಿಯ ವಿಚಾರವಾಗಿತ್ತು. ಅಲ್ಲಿ ಪೆನ್ನು, ಪೇಪರ್ ಅಥವಾ ಯಾವುದೇ ಔಪಚಾರಿಕ ಮಾತುಕತೆ ಇರಲಿಲ್ಲ. ನಮ್ಮ ನಡುವೆ ಇದ್ದದ್ದು ಸೌಹಾರ್ದಯುತವಾದ ಮಾತುಕತೆ, ಅವರ ಸಮಸ್ಯೆಗಳನ್ನು ನಾನು ಆಲಿಸಿದೆ ಎಂದು ತಿಳಿಸಿದರು.