ಬೆಂಗಳೂರು : ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅಕ್ರಮ ಆಸ್ತಿಗಳಿಕೆ ಪ್ರಕರಣದ ಸಂಬಂಧ ವಿಶೇಷ ಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ಕಡತಗಳನ್ನು ಕರ್ನಾಟಕ ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿದೆ.
18 ವರ್ಷಗಳಿಂದ ನಡೆಯುತ್ತಿರುವ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಅಣ್ಣ ದ್ರಾವಿಡ ಮುನ್ನಟ್ರ ಕಳಗಂ ಪಕ್ಷದ ಕಾರ್ಯದರ್ಶಿಯಾಗಿರುವ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ, ಬೆಂಗಳೂರು ವಿಶೇಷ ನ್ಯಾಯಾಲಯ 4 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ, 100 ಕೋಟಿ ದಂಡವನ್ನು ವಿಧಿಸಿತ್ತು.
ಈ ಸಂಬಂಧ ಜಯಲಲಿತಾ ಅವರಿಗೆ ರಾಜ್ಯ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಜಯಲಲಿತಾ ಅವರಿಗೆ ಜಾಮೀನು ನೀಡಿತ್ತು. ಈ ಸಂದರ್ಭ ಮೇಲ್ಮನವಿ ಅರ್ಜಿ ಸಲ್ಲಿಕೆಗೆ ಸಂಬಂಧಿತ ದಾಖಲೆಗಳನ್ನು ರಾಜ್ಯ ಹೈಕೋರ್ಟ್ 3 ತಿಂಗಳಿನೊಳಗಾಗಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್, ಜಯಲಲಿತಾ ಪರ ವಕೀಲರಿಗೆ ಆದೇಶ ಹೊರಡಿಸಿತ್ತು. ಅದರಂತೆ ಡಿ.8ರಂದು ರಾಜ್ಯ ಹೈಕೋರ್ಟ ನಲ್ಲಿ ಮೇಲ್ಮನವಿಗಾಗಿ ಸಂಬಂಧಿತ ದಾಖಲೆ ಹಾಗೂ ಕಡತಗಳನ್ನು ಜಯಲಲಿತಾ ಪರ ವಕೀಲರು ಸಲ್ಲಿಸಿದ್ದಾರೆ.
ಪೇಪರ್ ಬುಕ್ ರೂಪದಲ್ಲಿ ದಾಖಲೆಗಳನ್ನು ತಯಾರಿಸಲಾಗಿದ್ದು, ಕಳೆದ 2 ತಿಂಗಳಿನಿಂದ ಜಯಲಲಿತಾ ಸೇರಿದಂತೆ 4 ಮಂದಿ ಆರೋಪಿಗಳ ಹಿರಿಯ ವಕೀಲರಾದ ಕುಮಾರ್, ಸೆಂಥಿಲ್, ಅಶೋಕನ್, ಆರ್.ಅನ್ಬುಕರಸು, ದಿವಾಕರ್, ಸೆಲ್ವಕುಮಾರು ಒಳಗೊಂಡ ತಂಡ ಈ ಕಡತಗಳ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದರು.
ಇಂದು ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿರುವ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿ, ಅವುಗಳಿಗೆ ನಿಗಧಿತ ಸಂಖ್ಯೆಗಳನ್ನು ನೀಡಲು 2 ದಿನಗಳು ಆಗಬಹುದೆಂದು ಮೂಲಗಳು ತಿಳಿಸಿವೆ. ಡಿ.17ರಿಂದ ಜಯಲಲಿತಾ ಸೇರಿದಂತೆ 4 ಮಂದಿ ಆರೋಪಿಗಳ ಮೇಲ್ಮನವಿ ಅರ್ಜಿ ಸಂಬಂಧಿತ ವಿಚಾರಣೆ ಪ್ರಾರಂಭವಾಗುವ ಸಾಧ್ಯತೆಗಳಿವೆ.