ನವದೆಹಲಿ : ಹಿಂದುಯೇತರರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಅವರ ರಾಜೀನಾಮೆಗೆ ಪಟ್ಟು ಹಿಡಿದಿರುವ ವಿಪಕ್ಷಗಳನ್ನು ಮನವೊಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸತತ ಎರಡನೇ ದಿನ ನಡೆಸಿದ ಪ್ರಯತ್ನವೂ ವಿಫಲವಾಗಿದೆ.
ಸಾಧ್ವಿ ಈಗಾಗಲೇ ಕ್ಷಮೆ ಕೇಳಿದ್ದಾರೆ. ಹೀಗಾಗಿ ಆ ವಿಚಾರವನ್ನು ಬಿಟ್ಟುಬಿಡಬೇಕು ಎಂದು ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಅವರು ವಿಪಕ್ಷ ಸದಸ್ಯರನ್ನು ಕೋರಿದ್ದರು. ಅದಕ್ಕೆ ಪ್ರತಿಪಕ್ಷಗಳು ಮಣಿದಿರಲಿಲ್ಲ. ಈ ನಡುವೆ ಲೋಕಸಭೆಯಲ್ಲೂ ಮೋದಿ ಅವರು ಇದೇ ಮನವಿ ಇಟ್ಟರು. ಆದರೆ ಮೋದಿ ಕೋರಿಕೆ ತಿರಸ್ಕರಿಸಿದ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು. ಇತರ ಪಕ್ಷಗಳು ಕಾಂಗ್ರೆಸ್ಸನ್ನು ಹಿಂಬಾಲಿಸಿದವು.
ಏತನ್ಮಧ್ಯೆ, ಸಾಧ್ವಿ ಅವರಿಗೆ ವಾಗ್ಧಂಡನೆ ನಿಲುವಳಿ ಅಂಗೀಕರಿಸುವಂತೆ ಆಗ್ರಹಿಸಿ ರಾಜ್ಯಸಭೆಯಲ್ಲಿನ ಒಂಬತ್ತು ಪಕ್ಷಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.
ಲೋಕಸಭೆಯಲ್ಲಿ ಹೇಳಿಕೆ ನೀಡಿದ ಪ್ರಧಾನಿ ಮೋದಿ, ಪ್ರತಿಯೊಬ್ಬರೂ ಸಾರ್ವಜನಿಕ ಜೀವನದಲ್ಲಿನ ತಮ್ಮ ಮಿತಿ ಅರಿತುಕೊಳ್ಳಬೇಕು. ಹೇಳಿಕೆ ನೀಡುವಾಗ ಮಿತಿಯೊಳಗೆ ಇರಬೇಕು. ಸಾಧ್ವಿ ಹೇಳಿಕೆ ಸಂಸತ್ತಿನಲ್ಲಿ ಚರ್ಚೆಯಾಗುವ ಮೊದಲೇ ಆ ಕುರಿತು ನಾನು ಅಸಮಾಧಾನ ವ್ಯಕ್ತಪಡಿಸಿದ್ದೇನೆ. ಯಾರೊಬ್ಬರೂ ಇಂತಹ ಹೇಳಿಕೆಗಳನ್ನು ಒಪ್ಪುವುದಿಲ್ಲ. ಸಚಿವರು ಈಗಾಗಲೇ ಕ್ಷಮೆ ಯಾಚಿಸಿದ್ದಾರೆ. ಅವರ ಸಾಮಾಜಿಕ ಹಿನ್ನೆಲೆ, ಅವರು ಹಳ್ಳಿಯವರು ಎಂಬುದನ್ನು ಪರಿಗಣಿಸಿ ಈ ವಿವಾದವನ್ನು ಇಲ್ಲಿಗೇ ಕೈಬಿಡಬೇಕು ಎಂದು ಮನವಿ ಮಾಡಿದರು.
ಮೋದಿ ಹೇಳಿಕೆ ತರುವಾಯ ಮಾತನಾಡಿದ ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಇಂತಹ ಘಟನೆ ಏಕೆ ಆಯಿತು ಎಂಬ ವಿವರವನ್ನು ಪ್ರತಿಪಕ್ಷಗಳು ಬಯಸುತ್ತವೆ. ನಾವು ಯಾವುದೇ ವ್ಯಕ್ತಿ ಅಥವಾ ಅವರ ಹಿನ್ನೆಲೆಯ ವಿರುದ್ಧವಿಲ್ಲ. ಆದರೆ ಹಲವಾರು ಬಿಜೆಪಿ ನಾಯಕರು ಇದೇ ರೀತಿ ವಿವಾದಾಸ್ಪದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದಾಗಿ ಸಾಮಾಜಿಕ ಏಕತೆಗೆ ಅಪಾಯ ಎದುರಾಗಿದೆ. ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದಕ್ಕೆ ಉತ್ತರ ಬೇಕು ಎಂದು ಆಗ್ರಹಿಸಿದರು. ಬಳಿಕ ಕಾಂಗ್ರೆಸ್ ಸಭಾತ್ಯಾಗ ನಡೆಸಿತು. ಎಡರಂಗ, ಐಯುಎಂಎಲ್, ಆಮ್ ಆದ್ಮಿ ಪಕ್ಷದ ಸದಸ್ಯರೂ ಸದನದಿಂದ ಹೊರ ನಡೆದರು.