ನವದೆಹಲಿ : ದೆಹಲಿ ಸರ್ಕಾರ ರಚನೆ ಕುರಿತಂತೆ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಹೇಳಿಕೆ ಕುರಿತಾದ ಗೊಂದಲ ಸಂಸತ್ತಿನ ಉಭಯ ಸದನಗಳಲ್ಲಿ ಇಂದು ಪ್ರತಿಧ್ವನಿಸಿದ್ದು, ಯಾವುದೇ ಕಲಾಪವೂ ನಡೆಯಲಿಲ್ಲ.
ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ ಸಚಿವೆ ರಾಜೀನಾಮೆ ನೀಡಬೇಕು ಎಂಬುದು ವಿಪಕ್ಷ ಒಕ್ಕೂಟದ ಪಟ್ಟಾದರೆ, ಸಚಿವೆ ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂಬುದು ಆಡಳಿತಾರೂಢ ಪಕ್ಷ ಬಿಜೆಪಿ ವಾದವಾಗಿದೆ. ಹಾಗಾಗಿ ಎರಡೂ ಸದನಗಳಲ್ಲಿ ವಿಪಕ್ಷಗಳ ಸದಸ್ಯರು ಕೋಲಾಹಲ ಉಂಟುಮಾಡಿದ್ದರಿಂದ ಕಲಾಪವನ್ನು ಮುಂದೂಡಲಾಯಿತು.
ಈ ಸಂದರ್ಭ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸರ್ಕಾರ ಸಚಿವೆಯನ್ನು ಕೈಬಿಡುವವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಕೇಂದ್ರ ಸಚಿವ ಎಂ.ವೆಂಕಯ್ಯನಾಯ್ಡು, ಈಗಾಗಲೇ ಸಚಿವೆ ಎರಡೂ ಸದನಗಳಲ್ಲಿ ಕ್ಷಮೆ ಯಾಚಿಸಿದ್ದು, ವಿಪಕ್ಷಗಳು ಹಠ ಹಿಡಿಯದೆ ಕಲಾಪಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದರು.
ಪ್ರಧಾನಿ ನರೇಂದ್ರಮೋದಿಯವರು ಕೂಡ ಉತ್ತರ ನೀಡಿದ್ದಾರೆ. ಹೀಗೆ ವಿಪಕ್ಷಗಳು ಪಟ್ಟು ಹಿಡಿಯುವುದು ಸರಿಯಲ್ಲ ಎಂದು ನಾಯ್ಡು ಹೇಳಿದರು. ಆದರೆ, ಅವರ ಮಾತಿಗೆ ಸಮಾಧಾನಗೊಳ್ಳದ ವಿಪಕ್ಷಗಳು ಗದ್ದಲ ಮುಂದುವರಿಸಿದಾಗ ಸದನದ ಕಲಾಪಗಳನ್ನು ಮುಂದೂಡಬೇಕಾಯಿತು.