ಜಾರ್ಖಂಡ್ : ಜಾರ್ಖಂಡ್ ನ ಸಿಂಗಭೂಮ್ ಜಿಲ್ಲೆಯ ನಕ್ಸಲರು ಗಣಿ ಇಲಾಖೆಯ ನಾಲ್ವರು ಅಧಿಕಾರಿಗಳನ್ನು ಅಪಹರಿಸಿದ್ದಾರೆ ಎಂದು ಶಂಕಿಸಲಾಗಿದೆ.
ಸಿಂಗಭೂಮ್ ಜಿಲ್ಲೆಯ ಎಸ್.ಪಿ ನರೇಂದ್ರ ಕುಮಾರ್ ಸಿಂಗ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಡಿ.4ರ ಸಂಜೆ ಗಣಿ ಇಲಾಖೆಯ ನಾಲ್ವರು ಅಧಿಕಾರಿಗಳನ್ನು ಅಪಹರಣ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಚೈಬಾಸಾ ಎಂಬಲ್ಲಿ ಗಣಿ ಪ್ರದೇಶ ತಪಾಸಣೆಗೆ ತೆರಳಿದ್ದ ಅಧಿಕಾರಿಗಳು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಶಂಕೆ ವ್ಯಕ್ತವಾಗಿದೆ. ತಪಾಸಣೆಗೆ ತೆರಳುವುದಕ್ಕೂ ಮುನ್ನ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ ಎಂದು ನರೇಂದ್ರ ಕುಮಾರ್ ತಿಳಿಸಿದ್ದಾರೆ. ಅಧಿಕಾರಿಗಳ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ. ಸಿಂಗಭೂಮ್ ಜಿಲ್ಲೆಯಲ್ಲಿ ಶೇ.39.75ರಷ್ಟು ಭೂಮಿ ಕಾಡು ಪ್ರದೇಶವಾಗಿದೆ. ಜಾರ್ಖಂಡ್ ರಾಜ್ಯದ ಸಿಂಗಭೂಮ್ ಜಿಲ್ಲೆ ನಕ್ಸಲ್ ಅಡಗುತಾಣವಾಗಿದ್ದು ಅಧಿಕಾರಿಗಳನ್ನು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿದೆ.