ನವದೆಹಲಿ : ಕಳೆದ ಲೋಕಸಭೆ ಚುನಾವಣೆ ಹಾಗೂ ಇತ್ತೀಚಿನ ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡಿದ್ದ ಜನತಾ ಪರಿವಾರದ ಪ್ರಾದೇಶಿಕ ಪಕ್ಷಗಳು ಈಗ ಮತ್ತೆ ಒಂದಾಗಲು ನಿರ್ಧರಿಸಿವೆ.
ಈ ಕುರಿತು ನಡೆದ ಮ್ಯಾರಾಥಾನ್ ಸಭೆಯಲ್ಲಿ ಪಾಲ್ಗೊಂಡಿದ್ದ ಜೆಡಿ(ಯು) ನಾಯಕ ಮತ್ತು ಬಿಹಾರ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಧಿಕೃತವಾಗಿ ಹೇಳಿಕೆ ನೀಡಿದ್ದು, ಸಭೆಯಲ್ಲಿ ಎಲ್ಲಾ ಪ್ರಾದೇಶಿಕ ಪಕ್ಷಗಳ ನಾಯಕರು ಚರ್ಚೆ ನಡೆಸಿದ್ದಾರೆ. ಹಲವು ನಿಯಮಗಳ ಮೇರೆಗೆ ತಮ್ಮ ಪಕ್ಷಗಳನ್ನು ಜನತಾ ಪರಿವಾರಕ್ಕೆ ಸೇರ್ಪಡೆಗೊಳಿಸಲು ಎಲ್ಲಾ ಪಕ್ಷದ ನಾಯಕರು ಮನಸ್ಸು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ನಮಗೆ ನಮ್ಮದೇ ಆದ ಸೈದ್ದಾಂತಿಕ ಸಿದ್ದಾಂತಗಳಿದ್ದು, ರಾಜಕೀಯದಲ್ಲಿ ಬೆಳೆಯಬೇಕಾದರೆ ವಿರೋಧ ಪಕ್ಷಗಳು ಒಗ್ಗೂಡಿ ಕೆಲಸ ಮಾಡಬೇಕು. ಆಗಲೇ ಪಕ್ಷ ಶಕ್ತಿಶಾಲಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ಹೇಳಿದ್ದಾರೆ.
ಅಲ್ಲದೆ ಸಭೆಯಲ್ಲಿ ಕಪ್ಪುಹಣ, ಅತ್ಯಾಚಾರ ಪ್ರಕರಣಗಳು, ನಿರುದ್ಯೋಗದಂತಹ ಹತ್ತು ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ್ದು, ಡಿ.22 ರಂದು ದೆಹಲಿಯಲ್ಲಿ ಧರಣಿ ನಡೆಸಲು ಎಲ್ಲಾ ಪಕ್ಷದ ನಾಯಕರು ತೀರ್ಮಾನಿಸಿದ್ದಾರೆ ಎಂದು ವಿವರಿಸಿದರು. ಒಟ್ಟಿನಲ್ಲಿ ಹಲವು ವರ್ಷಗಳ ಬಳಿಕ ಮತ್ತೆ ಪ್ರಾದೇಶಿಕ ಪಕ್ಷಗಳು ವಿಲೀನಗೊಂಡಂತಾಗಿದೆ