ನವದೆಹಲಿ : ಕೇಂದ್ರ ಆಹಾರ ಸಂಸ್ಕರಣೆ ಖಾತೆ ಸಹಾಯಕ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಅವರ ಹೇಳಿಕೆ ಅಸಂಬದ್ಧವಾದದ್ದು, ಇನ್ನು ಮುಂದೆ ಈ ರೀತಿ ನಡೆಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಸಾಧ್ವಿ ನಿರಂಜನ್ ಜ್ಯೋತಿ ಅವರ ವಿವಾದಾತ್ಮಕ ಹೇಳಿಕೆ ರಾಜ್ಯಸಭೆಯಲ್ಲಿ ಮಾರ್ದನಿಸಿತು. ವಿಪಕ್ಷ ಸಂಸದರು ವಿವಾದಾತ್ಮಕ ಹೇಳಿಕೆ ಕುರಿತಂತೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ ಅವರು, ಸಚಿವೆ ಸಾಧ್ವಿ ಅವರ ಹೇಳಿಕೆ ಅಸಂಬದ್ಧವಾದದ್ದು, ಈ ಹೇಳಿಕೆ ಹೊರಬರುತ್ತಿದ್ದಂತೆ ನಾನು ಅಸಮಧಾನ ವ್ಯಕ್ತಪಡಿಸಿದ್ದೆ. ಸಚಿವೆ ಮೊದಲ ಬಾರಿಗೆ ಸಂಸದರಾಗಿರವುದರಿಂದ ಆವೇಶದಲ್ಲಿ ಈ ರೀತಿ ಮಾತನಾಡಿದ್ದಾರೆ ಇನ್ನು ಮುಂದೆ ಈ ರೀತಿಯ ಆಗದಂತೆ ನೋಡಿಕೊಳ್ಳುತ್ತೇನೆ ಎಂದರು.
ಯಾರ ಮರ್ಯಾದೆಯನ್ನು ಕಳೆಯಲು ನಾವು ಇಚ್ಛಿಸುವುದಿಲ್ಲ. ತಮ್ಮ ತಪ್ಪಿಗಾಗಿ ಸಾಧ್ವಿ ಅವರು ಈಗಾಗಲೇ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಹೀಗಾಗಿ ಸಂಸತ್ ಕಲಾಪಗಳನ್ನು ಸುಗಮವಾಗಿ ನಡೆಯಲು ಸಹಕರಿಸುವಂತೆ ವಿಪಕ್ಷ ಸಂಸದರಲ್ಲಿ ಮೋದಿ ಮನವಿ ಮಾಡಿದರು.
ಸಾಧ್ವಿ ಅವರ ವಿವಾದಾತ್ಮಕ ಹೇಳಿಕೆ ಪರಿಣಾಮ ಎಲ್ಲರಿಗೂ ಒಂದು ಸಂದೇಶ ಸಿಕ್ಕಿಂತಾಗಿದೆ. ಹೀಗಾಗಿ ಸಂಸದರು ಯೋಚಿಸಿ ಮಾತನಾಡುವುದು ಸೂಕ್ತ ಎಂದು ಎನ್ಡಿಎ ಸಂಸದರಿಗೆ ಮೋದಿ ಎಚ್ಚರಿಕೆ ನೀಡಿದರು.