ನವದೆಹಲಿ : ಬಿಡಿ ಸಿಗರೇಟು ಮಾರಾಟಕ್ಕೆ ನಿಷೇಧ ಹೇರುವ ನಿರ್ಧಾರವನ್ನು ತಕ್ಷಣಕ್ಕೆ ಜಾರಿಗೆ ತರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಬಿಡಿ ಸಿಗರೇಟು ನಿಷೇಧದಿಂದ ತಂಬಾಕು ಬೆಳೆಯುವ ರೈತರ ಮೇಲೆ ಆಗುವ ಪರಿಣಾಮಗಳ ಬಗ್ಗೆ ಕರ್ನಾಟಕ ಮತ್ತು ಆಂಧ್ರಪ್ರದೇಶದ ರೈತರು ಹಾಗೂ ಸಂಸದರು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಭರವಸೆ ನೀಡಿದೆ.
ಈ ವಿಷಯವನ್ನು ಕೇಂದ್ರ ಆರೋಗ್ಯ ಖಾತೆ ಸಚಿವ ಜೆ.ಪಿ.ನಡ್ಡಾ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ತಕ್ಷಣಕ್ಕೆ ಭಾರೀ ಪ್ರಮಾಣದಲ್ಲಿ ಬೆಲೆ ಕುಸಿತ ಮತ್ತು ತಕ್ಷಣಕ್ಕೆ ಹೊಸ ಬೆಳೆಯನ್ನು ಬೆಳೆಯಬೇಕಾದ ಭೀತಿಯಲ್ಲಿದ್ದ ಉಭಯ ರಾಜ್ಯಗಳ ಲಕ್ಷಾಂತರ ರೈತರು ನೆಮ್ಮದಿ ಪಡುವಂತಾಗಿದೆ.
ಎರಡುದಿನಗಳ ಹಿಂದಷ್ಟೇ ಕರ್ನಾಟಕದ ತಂಬಾಕು ಬೆಳೆಗಾರರ ನಿಯೋಗ, ದೆಹಲಿಯಲ್ಲಿ ಸಚಿವರಾದ ವೆಂಕಯ್ಯನಾಯ್ಡು, ವಾಣಿಜ್ಯ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ, ಬಿಡಿ ಸಿಗರೇಟು ಮಾರಾಟ ನಿಷೇಧದಿಂದ ತಂಬಾಕು ಬೆಳೆಗಾರರು ಅನುಭವಿಸಬೇಕಾದ ಕಷ್ಟಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿತ್ತು. ಅಲ್ಲದೆ ದೆಹಲಿಯಲ್ಲಿ ಪ್ರತಿಭಟನೆಯನ್ನೂ ನಡೆಸಿತ್ತು. ಇದರ ಬೆನ್ನಲ್ಲೇ, ಕರ್ನಾಟಕ ಮತ್ತು ಆಂಧ್ರಪ್ರದೇಶ ಮೂಲದ ಸಚಿವರಾದ ಅನಂತ್ಕುಮಾರ್, ವೆಂಕಯ್ಯ ನಾಯ್ಡು ಮತ್ತು ನಿರ್ಮಲಾ ಸೀತಾರಾಮನ್ ಹಾಗೂ ಉಭಯ ರಾಜ್ಯಗಳ ಹಲವು ಸಂಸದರು ಕೇಂದ್ರ ಆರೋಗ್ಯ ಖಾತೆ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿದ್ದರು. ಈ ಭೇಟಿ ವೇಳೆ ಏಕಾಏಕಿ ಬಿಡಿ ಸಿಗರೇಟು ಮಾರಾಟದ ಮೇಲೆ ನಿಷೇಧ ಹೇರುವುದರಿಂದ ಲಕ್ಷಾಂತರ ತಂಬಾಕು ಬೆಳೆಗಾರರು ಸಂಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳಲಿದ್ದಾರೆ ಎಂದು ಮನವರಿಕೆ ಮಾಡಿಕೊಟ್ಟಿದ್ದರು.